ADVERTISEMENT

ದಸರಾ ವೇಳೆಗೆ 'ಕಾವೇರಿ ಆರತಿ'

ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ರಮೇಶ ಬಂಡಿಸಿದ್ದೇಗೌಡ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 7:24 IST
Last Updated 4 ಜೂನ್ 2025, 7:24 IST
<div class="paragraphs"><p>ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಬಳಿ ವಿತರಣಾ ನಾಲೆಗಳಾದ ಬೇವಿನತಾಳು ಮತ್ತು ಪೇಟೆ ಗದ್ದೆ ನಾಲೆಗಳ ₹4.98 ಕೋಟಿ ವೆಚ್ಚದ ಆಧುನೀಕರಣ ಕಾಮಗಾರಿಗೆ ಸೆಸ್ಕ್‌ ಅಧ್ಯಕ್ಷ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ಚಾಲನೆ ನೀಡಿದರು.</p></div>

ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಬಳಿ ವಿತರಣಾ ನಾಲೆಗಳಾದ ಬೇವಿನತಾಳು ಮತ್ತು ಪೇಟೆ ಗದ್ದೆ ನಾಲೆಗಳ ₹4.98 ಕೋಟಿ ವೆಚ್ಚದ ಆಧುನೀಕರಣ ಕಾಮಗಾರಿಗೆ ಸೆಸ್ಕ್‌ ಅಧ್ಯಕ್ಷ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ಚಾಲನೆ ನೀಡಿದರು.

   

ಶ್ರೀರಂಗಪಟ್ಟಣ: ‘ತಾಲ್ಲೂಕಿನ ಕೆಆರ್‌ಎಸ್‌ ಬಳಿ ದಸರಾ ಹಬ್ಬದ ಹೊತ್ತಿಗೆ ಕಾವೇರಿ ಆರತಿ ಆರಂಭವಾಗುವುದು ಖಚಿತ’ ಎಂದು ಸೆಸ್ಕ್‌ ಅಧ್ಯಕ್ಷ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ತಾಲ್ಲೂಕಿನ ಕೆಆರ್‌ಎಸ್‌ನ ಅರಳಿಕಟ್ಟೆ ವೃತ್ತದಲ್ಲಿ, ಕೆಆರ್‌ಎಸ್‌–ಎಂಎನ್‌ಪಿಎಂ ವೃತ್ತ ರಸ್ತೆಯನ್ನು ₹9.96 ಕೋಟಿ ವೆಚ್ಚದಲ್ಲಿ ಚತುಷ್ಪ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ADVERTISEMENT

₹93 ಕೋಟಿ ವೆಚ್ಚದಲ್ಲಿ ಕಾವೇರಿ ಆರತಿ ಈ ಕಾರ್ಯಕ್ರಮ ರೂಪಿಸುತ್ತಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ಇದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅವರ ಜತೆ ಚರ್ಚಿಸಿ ಕಾವೇರಿ ಆರತಿಯ ಮಹತ್ವ ಮನವರಿಕೆ ಮಾಡಿಕೊಡಲಿದ್ದಾರೆ. ಕಾವೇರಿ ಆರತಿ ವೀಕ್ಷಣೆಗೆ ಶುಲ್ಕ ಇರುವುದಿಲ್ಲ. ಎಲ್ಲರಿಗೂ ಮುಕ್ತ ಅವಕಾಶ ಇರುತ್ತದೆ. ಇದೇ ಸ್ಥಳದಲ್ಲಿ ಆಕರ್ಷಕ ಸಂಗೀತ ಕಾರಂಜಿ ನಿರ್ಮಾಣವಾಗಲಿದ್ದು, ಸ್ಥಳೀಯ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಿದ್ದಾರೆ ಎಂದು ಹೇಳಿದರು.

ತಿಂಗಳಲ್ಲಿ ಹಕ್ಕುಪತ್ರ: ಕೆಆರ್‌ಎಸ್‌ ಗ್ರಾಮದ ನಿವಾಸಿಗಳಿಗೆ ಇನ್ನು ಒಂದು ತಿಂಗಳಲ್ಲಿ ಅಧಿಕೃತ ಹಕ್ಕುಪತ್ರಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದರು. ಈ ಸಂಬಂಧ ಮನೆ ಮನೆ ಸರ್ವೆ ನಡೆಸಿ ಪಟ್ಟಿ ಸಿದ್ದಪಡಿಸುಂತೆ ತಹಶೀಲ್ದಾರ್‌ಗೆ ಸೂಚಿಸಲಾಗಿದೆ ಎಂದರು.

‘ಕನ್ನಡ ತಮಿಳು ಭಾಷೆಯಿಂದ ಹುಟ್ಟಿದೆ ಎಂಬ ನಟ ಕಮಲ್‌ ಹಾಸನ್‌ ಅವರ ಹೇಳಿಕೆಯಿಂದ ಕನ್ನಡಿಗರ ಮನಸ್ಸಿಗೆ ನೋವಾಗಿದೆ. ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಬೇಕು’ ಎಂದು ಆಗ್ರಹಿಸಿದರು.

ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಜಯಂತ್‌, ಎಇಇಗಳಾದ ಫಾರೂಕ್‌ ಅಬು, ಕಿಶೋರ್‌, ತಾ.ಪಂ. ಇಒ ಎ.ಬಿ. ವೇಣು, ಗ್ರಾ.ಪಂ. ಅಧ್ಯಕ್ಷೆ ಜಯಂತಿ, ಮಾಜಿ ಅಧ್ಯಕ್ಷ ಎಂ.ಬಿ. ಕುಮಾರ್‌, ಸದಸ್ಯರಾದ ದೇವರಾಜು, ನಾಗೇಂದ್ರ, ರವಿಕುಮಾರ್‌, ಸ್ನೇಕ್‌ ದೀಪು, ರಾಣಿ, ಸುಧಾ, ಶಶಿಕಲಾ, ಪಾಲಹಳ್ಳಿಯಲ್ಲಿ ಎಂಡಿಸಿಸಿ ಬ್ಯಾಂಕ್‌ ನಿರ್ದೇಶಕ ಪಿ.ಎಸ್‌. ಚಂದ್ರಶೇಖರ್‌, ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮಿ, ಮಾಜಿ ಅಧ್ಯಕ್ಷ ಗೋವಿಂದರಾಜು, ಕಿರಂಗೂರು ಬಳಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಆರ್‌. ರೂಪಾ, ಮಾಜಿ ಅಧ್ಯಕ್ಷ ದೀಪು, ತಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್‌. ಸಂದೇಶ್, ಪಿಕಾರ್ಡ್‌ ಬ್ಯಾಂಕ್‌ ನಿರ್ದೇಶಕ ಬಿ.ಎಸ್‌.ವಾಸು ಇದ್ದರು.

ಪಟ್ಟಣದಲ್ಲಿ ತಹಶೀಲ್ದಾರ್‌ ಪರಶುರಾಮ ಸತ್ತಿಗೇರಿ, ಪುರಸಭೆ ಅಧ್ಯಕ್ಷ ಎಂ.ಎಲ್‌.ದಿನೇಶ್, ಮುಖ್ಯಾಧಿಕಾರಿ ಎಂ.ರಾಜಣ್ಣ, ಟಿಪಿಸಿಎಂಎಸ್‌ ಅಧ್ಯಕ್ಷ ಎಂ.ನಂದೀಶ್ ಪಾಲ್ಗೊಂಡಿದ್ದರು.

ಚಾಲನೆ ನೀಡಲಾದ ಕಾಮಗಾರಿಗಳು

ತಾಲ್ಲೂಕಿನ ಪಾಲಹಳ್ಳಿ ಬಳಿಯ ದೇವರಾಯ ನಾಲೆಯ ಶಾಖಾ ನಾಲೆಗಳಾದ ಬೇವಿನತಾಳು ಮತ್ತು ಪೇಟೆ ಗದ್ದೆ ನಾಲೆಗಳ ಅಭಿವೃದ್ಧಿಯ ₹4.98 ಕೋಟಿ ವೆಚ್ಚದ ಕಾಮಗಾರಿ ತಾಲ್ಲೂಕಿನ ಕಿರಂಗೂರು ಬಳಿಯ ಕುಂಬಾರಗುಂಡಿ ನಾಲೆ ಅಭಿವೃದ್ಧಿಯ ₹5 ಕೋಟಿ ವೆಚ್ಚದ ಕಾಮಗಾರಿ ಹಾಗೂ ಕೂಡಲಕುಪ್ಪೆ ಬಳಿಯ ಎರಮಣಿ ಪಿಕಪ್‌ ನಾಲೆಯ ₹5 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಬಳಿಕ ₹2 ಕೋಟಿ ವೆಚ್ಚದ ಪಟ್ಟಣದ ಚಂದಗಾಲು ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಟಿ.ಎಂ.ಹೊಸೂರು– ಆಲಗೂಡು– ಕೊಡಿಯಾಲ ಸಂಪರ್ಕ ರಸ್ತೆಯ ₹3 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅವರು ಚಾಲನೆ ನೀಡಿದರು. ಪಿಎಂಜಿಎಸ್‌ವೈ ಯೋಜನೆಯಡಿ ₹21 ಕೋಟಿ ವೆಚ್ಚದಲ್ಲಿ ಗ್ರಾಮೀಣ ರಸ್ತೆಗಳು ಅಭಿವೃದ್ಧಿಯಾಗಲಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.