ಶ್ರೀರಂಗಪಟ್ಟಣ: ತಾಲ್ಲೂಕಿನ ಬಳ್ಳೇಕೆರೆ ಗ್ರಾಮದಲ್ಲಿ ಎರಡು ದಶಕಗಳ ಹಿಂದೆ ಆರಂಭವಾದ ಸಮುದಾಯ ಭವನ ನಿರ್ಮಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಅಪೂರ್ಣ ಕಟ್ಟಡ ಪಾಳು ಬಂಗಲೆಯಂತೆ ಕಾಣುತ್ತಿದೆ.
ಬಳ್ಳೇಕೆರೆ ಮತ್ತು ಅರಕೆರೆ ಗ್ರಾಮಗಳ ನಡುವೆ ಇರುವ ಕೆರೆಯ ಏರಿಯ ಪಕ್ಕದ ಪಟ್ಟಲದಮ್ಮ ದೇವಾಲಯದ ಬಳಿ ನಿರ್ಮಿಸಲು ಆರಂಭಿಸಿದ ಭವನದ ಕಾಮಗಾರಿ 15 ವರ್ಷಗಳ ಹಿಂದೆಯೇ ಸ್ಥಗಿತಗೊಂಡಿದೆ. ಅಂದು ನಿರ್ಮಿಸಿರುವ ಭವನದ ಗೋಡೆಗಳ ಇಟ್ಟಿಗೆಗಳು ಬೀಳಲಾರಂಭಿಸಿವೆ. ಚಾವಣಿಯಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಸದ್ಯ ಇದಕ್ಕೆ ವಾರಸುದಾರರೇ ಇಲ್ಲದಂತಾಗಿದೆ.
‘ಅಂಬರೀಷ್ ಅವರು ಸಂಸದರಾಗಿದ್ದ ಅವಧಿಯಲ್ಲಿ 20 ವರ್ಷಗಳ ಹಿಂದೆ ಈ ಭವನ ನಿರ್ಮಾಣಕ್ಕೆ ₹ 20 ಲಕ್ಷ ಬಿಡುಗಡೆಯಾಗಿತ್ತು. ಬಂದ ಹಣ ಖರ್ಚಾಗಿದೆ. ಮುಂದುವರಿದ ಕಾಮಗಾರಿಗೆ ಹಣ ಬಿಡುಗಡೆಯಾಗಿಲ್ಲ. ಹಾಗಾಗಿ ನಿರ್ಮಾಣ ಕಾರ್ಯ ಅಪೂರ್ಣಗೊಂಡಿದೆ. ಅಧಿಕಾರಿಗಳು ಇದನ್ನು ಮರೆತೇ ಬಿಟ್ಟಿದ್ದಾರೆ. ಊರಿನ ಹೊರಗೆ ಇರುವ ಈ ಅಪೂರ್ಣ ಕಟ್ಟಡ ಜೂಜುಕೋರರ ಆವಾಸ ಸ್ಥಾನವಾಗಿದೆ’ ಎಂದು ಗ್ರಾ.ಪಂ. ಮಾಜಿ ಪ್ರಧಾನ ಸುರೇಂದ್ರ ಬೇಸರ ವ್ಯಕ್ತಪಡಿಸುತ್ತಾರೆ.
20 ವರ್ಷಗಳ ಹಿಂದೆ ನಿರ್ಮಿಸಲು ಆರಂಭಿಸಿದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಸಕಾಲಕ್ಕೆ ಅನುದಾನ ಬಾರದೆ ಅರ್ಧಕ್ಕೆ ನಿಂತಿದೆ. ಹತ್ತಾರು ವರ್ಷಗಳ ಕಾಲ ಹಾಗೇ ಬಿಟ್ಟ ಕಾರಣ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಈ ಬಗ್ಗೆ ತನಿಖೆ ನಡೆಸಬೇಕು. ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಭವನದ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಹೊನ್ನೇಗೌಡ ಇತರರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.