ADVERTISEMENT

ಟಾರ್ಚ್‌ ಬಿಟ್ಟು ನೋಡುವ ಪರಿಸ್ಥಿತಿ ಸಿದ್ದರಾಮಯ್ಯಗೆ ಬೇಕಿತ್ತಾ?: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 12:18 IST
Last Updated 26 ಆಗಸ್ಟ್ 2024, 12:18 IST
   

ಮಂಡ್ಯ: ‘ಸಿದ್ದರಾಮಯ್ಯನವರು ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಜಾಗವನ್ನು ಲಪಟಾಯಿಸಿದ್ದಾರೆ. ₹67 ಕೋಟಿಯನ್ನು ಲೂಟಿ ಮಾಡಿದ್ದಾರೆ. ಮುಖ್ಯಮಂತ್ರಿಗೆ ತಪ್ಪಿನ ಅರಿವಿಲ್ಲ. ಮೊದಲು ಜಾಗ ಯಾರದ್ದು ಎಂಬುದನ್ನು ಹೇಳಲಿ. ಈಗ ದಾಖಲೆಗಳಿಗೆ ಟಾರ್ಚ್‌ ಬಿಟ್ಟು ನೋಡುತ್ತಿದ್ದಾರೆ. ಈ ಪರಿಸ್ಥಿತಿ ಸಿದ್ದರಾಮಯ್ಯನವರಿಗೆ ಬೇಕಿತ್ತಾ?’ ಎಂದು ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಕುಮಾರಸ್ವಾಮಿ ಮೇಲೆ ಸಿದ್ದರಾಮಯ್ಯನವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಪೊಲೀಸ್‌ ಇಲಾಖೆ ಬಿಟ್ಟು ಏನೇನು ನಡೆಸುತ್ತಿದ್ದಾರೆ ಎಂಬುದು ಗೊತ್ತಿದೆ. ನಾನು ಜೈಲಿಗೆ ಹೋಗುವಂಥದ್ದು ಏನೂ ಮಾಡಿಲ್ಲ. ನೂರು ಜನ್ಮ ಎತ್ತಿ ಬಂದರೂ ಏನು ಮಾಡಲು ಆಗುವುದಿಲ್ಲ’ ಎಂದು ತಿರುಗೇಟು ನೀಡಿದರು.

ಕಾರಲ್ಲಿ ಯಾಕೆ ದಾಖಲೆ ಇಟ್ಟುಕೊಂಡಿದ್ದೀರಾ? ಜನಗಳ ಮುಂದೆ ಇಡಿ. ಸಾಯಿ ವೆಂಕಟೇಶ್ವರ ಪ್ರಕರಣ ಸತ್ತಿದ್ದು, ರೆಕಮೆಂಡ್‌ ಬಿಟ್ಟು ಅದು ಮುಂದೆ ಹೋಗಿಲ್ಲ ಎಂದು ಹೇಳಿದರು.

ADVERTISEMENT

ಸರ್ಕಾರ ಬೀಳಿಸಲು ಎಚ್‌ಡಿಕೆ ಷಡ್ಯಂತ್ರ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಸರ್ಕಾರ ತೆಗೆಯಲು ಒಟ್ಟು ₹5 ಸಾವಿರ ಕೋಟಿ ಅಂದ್ರೆ ಯಾರಾದರೂ ನಂಬುತ್ತಾರಾ? ಕುಮಾರಸ್ವಾಮಿ ಭಜನೆ ಮಾಡದೆ ಸುಮ್ಮನಿರಲು ಅವರಿಗೆ ಸಾಧ್ಯವಿಲ್ಲ. ಸರ್ಕಾರ ಬೀಳುತ್ತದೆ ಎಂದು ಅವರೇ ಹೇಳುತ್ತಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದರು.

ಚನ್ನಪಟ್ಟಣಕ್ಕೆ ಎನ್‌ಡಿಎ ಅಭ್ಯರ್ಥಿ:

ಚನ್ನಪಟ್ಟಣ ಅಭ್ಯರ್ಥಿ ಬಗ್ಗೆ ಹೈಕಮಾಂಡ್‌ ತೀರ್ಮಾನ ಮಾಡಲಿದೆ. ನಾನು ಚುನಾವಣೆ ಗೆಲ್ಲಲು ಏನು ತೀರ್ಮಾನ ಮಾಡಬೇಕು ಮಾಡ್ತೀನಿ. ಜೆಡಿಎಸ್‌ನಲ್ಲೂ ಸಮರ್ಥ ಕಾರ್ಯಕರ್ತರಿದ್ದಾರೆ. ಚನ್ನಪಟ್ಟಣದಲ್ಲಿ ಎನ್‌.ಡಿ.ಎ. ಅಭ್ಯರ್ಥಿ ಕಣದಲ್ಲಿರುತ್ತಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.