ಮಂಡ್ಯ: ‘ಜಿಲ್ಲೆಯ 233 ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಾಯಿತ ಸಕ್ರಿಯ ಕುಟುಂಬಗಳ ಉದ್ಯೋಗ ಚೀಟಿಯ ಎಲ್ಲ ಸದಸ್ಯರು ಅ.31ರ ಒಳಗಾಗಿ ಇ-ಕೆವೈಸಿ ಹೊಂದುವುದು ಕಡ್ಡಾಯವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ನಂದಿನಿ ಕೆ.ಆರ್. ತಿಳಿಸಿದ್ದಾರೆ.
ಇ– ಕೆವೈಸಿಯು ‘ಎಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್’ ಆಗಿದೆ. ಇದು ಗ್ರಾಹಕರ ಗುರುತು ಮತ್ತು ವಿಳಾಸವನ್ನು ಆಧಾರ್ ದೃಢೀಕರಣದಂತಹ ಡಿಜಿಟಲ್ ವಿಧಾನಗಳ ಮೂಲಕ ಪರಿಶೀಲಿಸುವ ಒಂದು ಆನ್ಲೈನ್ ಪ್ರಕ್ರಿಯೆಯಾಗಿದೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಆದೇಶದಂತೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪತ್ರ ಹಾಗೂ ವಿಡಿಯೊ ಸಂವಾದದ ಆದೇಶದ ಮೇರೆಗೆ ಮಹಾತ್ಮ ಗಾಂಧಿ ಯೋಜನೆಯಡಿ ಅನುಷ್ಠಾನಿಸುವ ಕಾಮಗಾರಿಗಳಲ್ಲಿ ಭಾಗವಹಿಸುವ ಕೂಲಿಕಾರರ ಹಾಜರಾತಿಯನ್ನು ‘ಎನ್.ಎಂ.ಎಂ.ಎಸ್’ ಆ್ಯಪ್ ನಲ್ಲಿ ಸೆರೆ ಹಿಡಿಯಲಾಗುತ್ತಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಪ್ರಾಯೋಗಿಕವಾಗಿ ಎನ್.ಎಂ.ಎಂ.ಎಸ್. –ಇ ಕೆವೈಸಿ ಸಕ್ರಿಯ ಕೂಲಿಕಾರರ ಮಾಹಿತಿಯನ್ನು ಅಪ್ಡೇಟ್ ಮಾಡಲು ಸೂಚಿಸಿದಂತೆ ರಾಜ್ಯದ 6 ಜಿಲ್ಲೆಗಳಲ್ಲಿ ಆರಂಭಗೊಳಿಸಲಾಗಿತ್ತು. ಇದರ ಯಶಸ್ವಿ ನಂತರ ಇತರೆ ಜಿಲ್ಲೆಗಳಿಗೂ ವಿಸ್ತರಿಸಲು ವಿಡಿಯೊ ಸಂವಾದದಲ್ಲಿ ತಿಳಿಸಲಾಗಿರುತ್ತದೆ.
ನರೇಗಾ ಯೋಜನೆಯಡಿ ಅನುಷ್ಠಾನಗೊಳ್ಳುವ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುವ ಕೂಲಿಕಾರರ ಪ್ರತಿಯೊಬ್ಬರ ಎಣಿಕೆ ಮೂಲಕ ಎನ್.ಎಂ.ಎಂ.ಎಸ್ ಹಾಜರಾತಿ ಸಂಖ್ಯೆ ಆನ್ಲೈನ್ ತೆಗೆದುಕೊಳ್ಳುತ್ತಿದ್ದು, ಇ-ಕೆವೈಸಿ ಹೊಂದುವ ಕೂಲಿಕಾರರ ಹಾಜರಾತಿ ತೆಗೆದುಕೊಳ್ಳುವಾಗ ಅವರ ಆಧಾರ್ ನಂಬರ್ ಮತ್ತು ಸ್ಥಳದಲ್ಲಿ ಹಾಜರಿದ್ದವರ ಮುಖ ಹೊಂದಾಣಿಕೆಯಾಗಿದ್ದಲ್ಲಿ ಮಾತ್ರ ಅವರನ್ನು ಎನ್.ಎಂ.ಎಂ.ಎಸ್ ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
2 ಲಕ್ಷ ಸಕ್ರಿಯ ಕೂಲಿಕಾರರು ‘ಇ-ಕೆವೈಸಿ ಮಾಡಿಸದೇ ಇರುವಂತಹ ಕೂಲಿಕಾರರು ನ.1ರಿಂದ NMMS ನಲ್ಲಿ ಹಾಜರಾತಿಯನ್ನು ಆನ್ಲೈನ್ನಲ್ಲಿ ತೆಗೆದುಕೊಳ್ಳುವುದಿಲ್ಲ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 200697 ಸಕ್ರಿಯ ಕೂಲಿಕಾರರಿದ್ದು ತುರ್ತಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಪ್ರತಿಯೊಬ್ಬ ಸಕ್ರಿಯ ನರೇಗಾ ಕೂಲಿಕಾರರು ಆಧಾರ್ ಕಾರ್ಡ ಹಾಗೂ ಜಾಬ್ ಕಾರ್ಡನೊಂದಿಗೆ ನಿಮ್ಮ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಇ-ಕೆವೈಸಿ ಹೊಂದಬೇಕು’ ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.