ಮದ್ದೂರು: ತಾಲ್ಲೂಕಿನ ಕೆ. ಹೊನ್ನಲಗೆರೆ ಬಳಿಯ ರಾಜೇಗೌಡನದೊಡ್ಡಿ ಗ್ರಾಮದಲ್ಲಿ ಮಣ್ಣಿನಿಂದ ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿಗಳನ್ನು ಆರ್.ಸಿ ನಂಜುಂಡಸ್ವಾಮಿ ಅವರು ಸುಮಾರು 17 ವರ್ಷಗಳಿಂದ ತಮ್ಮ ಮನೆಯಲ್ಲಿಯೇ ತಯಾರಿಸಿಕೊಂಡು ಬರುತ್ತಿದ್ದಾರೆ.
ಇದಕ್ಕಾಗಿ ತಮ್ಮ ಗ್ರಾಮದ ಬಾಣಂಜಿ ಕೆರೆಯಿಂದ ಜೇಡಿ ಮಣ್ಣನ್ನು ತಂದು ಅದನ್ನು ಚೆನ್ನಾಗಿ ಹದಗೊಳಿಸಿ ವರ್ಷಕ್ಕೆ ಸುಮಾರು 150 ಗಣೇಶ ಮೂರ್ತಿಗಳನ್ನು ತಯಾರಿಸುವ ಇವರು ಅಕ್ಕಪಕ್ಕದ ಗ್ರಾಮಗಳೂ ಸೇರಿದಂತೆ ಮದ್ದೂರು ಪಟ್ಟಣದಲ್ಲಿಯೂ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿಕೆಗೆ ಹೆಸರಾಗಿದ್ದಾರೆ.
1 ಅಡಿಯಿಂದ 4.5 ಅಡಿಗಳವರೆಗೆ ಜೇಡಿ ಮಣ್ಣಿನಿಂದ ಮೂರ್ತಿಯನ್ನು ತಯಾರು ಮಾಡುವ ನಂಜುಂಡಸ್ವಾಮಿ, ಇದಕ್ಕಾಗಿ 6-7 ತಿಂಗಳು ಪರಿಶ್ರಮ ಪಡುತ್ತಾರೆ. ಇವರ ಈ ಮೂರ್ತಿಗಳ ತಯಾರಿಕೆಗೆ ಇವರ ಪತ್ನಿ ಹಾಗೂ ಮಕ್ಕಳು ಸಹಾಯ ಮಾಡುತ್ತಾರೆ.
ನೂರಾರು ಮೂರ್ತಿಗಳನ್ನು ತಯಾರು ಮಾಡುವ ಇವರು ಗಣೇಶ ಚತುರ್ಥಿ ಹಬ್ಬ ಸಮೀಪಸುತ್ತಿದ್ದಂತೆಯೇ ಮದ್ದೂರು ಪಟ್ಟಣದಲ್ಲಿ ರಸ್ತೆ ಬದಿಯ ಅಂಗಡಿಯನ್ನು ಕೆಲ ದಿನಗಳು ತೆರೆದು ಮಾರಾಟ ಮಾಡುತ್ತಾರೆ. ಇವರು ತಮ್ಮ ವೃತ್ತಿಯಿಂದ ₹1ರಿಂದ 1.3 ಲಕ್ಷ ಲಾಭವನ್ನು ಪಡೆದು ತಮ್ಮ ಜೀವನಕ್ಕೆ ಈ ವೃತ್ತಿಯನ್ನು ಆಸರೆ ಮಾಡಿಕೊಂಡಿದ್ದಾರೆ.
17 ವರ್ಷಗಳಿಂದ ತಯಾರಿಕೆ
ಸುಮಾರು 17 ವರ್ಷಗಳಿಂದ ಪರಿಸರ ಸ್ನೇಹಿಯಾದ ಗೌರಿ ಗಣೇಶ ಮೂರ್ತಿಗಳನ್ನು ತಯಾರು ಮಾಡುತ್ತಿದ್ದೇನೆ. ಸಾರ್ವಜನಿಕರು ಪಿಒಪಿ ಹಾಗೂ ರಾಸಾಯನಿಕ ಗಣೇಶ ಮೂರ್ತಿಗಳ ಬದಲು ಪರಿಸರ ಸ್ನೇಹಿಯಾದ ಮಣ್ಣಿನಿಂದ ಮಾಡಿದ ಶ್ರೇಷ್ಠ ಹಾಗೂ ಮೂಲ ಪರಂಪರೆಯ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರ ಉಳಿಸಬೇಕು – ಆರ್.ಸಿ. ನಂಜುಂಡಸ್ವಾಮಿ ಪರಿಸರಸ್ನೇಹಿ ಗಣೇಶ ಮೂರ್ತಿ ತಯಾರಕ ರಾಜೇಗೌಡನ ದೊಡ್ಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.