ನಾಗಮಂಗಲ: ಪತ್ನಿಯು ಅನ್ಯ ವ್ಯಕ್ತಿಯೊಂದಿಗೆ ಸೇರಿ ತೊಂದರೆ ನೀಡುತ್ತಿದ್ದಾಳೆ ಎಂದು ಆರೋಪಿಸಿ, ಆಕೆಯ ನಡವಳಿಕೆಯಿಂದ ಬೇಸರಗೊಂಡ ವ್ಯಕಿ ತನ್ನ ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ತೊರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ಪಿಟ್ಟೇಕೊಪ್ಪಲು ಗ್ರಾಮದ ನಿವಾಸಿ ಗಂಗಾಧರ್ ಗೌಡ (38) ಮತ್ತು ಪುತ್ರ ಜಸ್ವಿತ್ (6) ಮೃತಪಟ್ಟವರು.
ಗಂಗಾಧರ್ ಗೌಡ ಮತ್ತು ಸಿಂಧೂ ಅವರಿಗೆ 8 ವರ್ಷದ ಹಿಂದೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದರು. ಸಿಂಧೂ ಮತ್ತು ಎಲ್.ಐ.ಸಿ ಏಜೆಂಟ್ ಒಬ್ಬರ ನಡುವೆ ಅನೈತಿಕ ಸಂಬಂಧದ ವಿಚಾರವಾಗಿ ಹಲವಾರು ಬಾರಿ ದಂಪತಿ ನಡುವೆ ಜಗಳ ನಡೆದಿತ್ತು. ಗ್ರಾಮಸ್ಥರು ಮತ್ತು ಹಿರಿಯರು ಹಲವು ಬಾರಿ ಪಂಚಾಯಿತಿ ನಡೆಸಿ ತಿಳಿವಳಿಕೆ ಹೇಳಿದ್ದರು. ಆದರೂ ಸಿಂಧೂ ನಡವಳಿಕೆ ಬದಲಾಯಿಸಿಕೊಂಡಿರಲಿಲ್ಲ. ಇದರಿಂದ ಬೇಸರಗೊಂಡ ಗಂಗಾಧರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಸೋದರ ದೂರು ನೀಡಿದ್ದಾರೆ.
ಗಂಗಾಧರ್ ಗೌಡ ಡೆತ್ ನೋಟ್ ಬರೆದಿಟ್ಟಿದ್ದು, ‘ನನ್ನ ಮತ್ತು ನನ್ನ ಮಗನ ಸಾವಿಗೆ ಪತ್ನಿ ಸಿಂಧೂ ಮತ್ತು ಎಲ್.ಐ.ಸಿ ಏಜೆಂಟ್ ಜಿ.ಸಿ.ನಂಜುಂಡೇಗೌಡ ಮುಖ್ಯ ಕಾರಣ. ಅವರು ನನಗೆ ಒಂದಿಲ್ಲೊಂದು ತೊಂದರೆ ಕೊಟ್ಟಿದ್ದು, ಅದನ್ನು ಹೇಳಲು ಸಾಧ್ಯವಾಗುವುದಿಲ್ಲ. ನೀವು ಅವರಿಗೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು’ ಎಂದು ಉಲ್ಲೇಖಿಸಿರುವ ಮಾಹಿತಿ ಲಭ್ಯವಾಗಿದೆ.
ಸ್ಥಳಕ್ಕೆ ಡಿವೈಎಸ್ಪಿ ನವೀನ್ ಕುಮಾರ್ ಮತ್ತು ಬಿಂಡಿಗನವಿಲೆ ಠಾಣೆಯ ಪಿಎಸ್ಐ ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತ ದೇಹಗಳನ್ನು ಕುಟುಂಬಸ್ಥರಿಗೆ ನೀಡಲಾಗಿದೆ. ಬಿಂಡಿಗನವಿಲೆ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.