ಮಳವಳ್ಳಿ (ಮಂಡ್ಯ): ‘ಕಳೆದ ಲೋಕಸಭಾ ಚುನಾವಣೆಯ ವೇಳೆ ನಾನು ಪ್ರಚಾರ ಮಾಡಲು ದೇವೇಗೌಡರ ಜೊತೆ ಬಂದಾಗ 4 ಜನ ಇರಲಿಲ್ಲ. ಜೆಡಿಎಸ್ ಅಭ್ಯರ್ಥಿ ಸೋಲುತ್ತಾರೆ ಎಂದು ಆಗಲೇ ತಿಳಿದಿತ್ತು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಮಳವಳ್ಳಿ ತಾಲ್ಲೂಕಿನ ಸಾಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಮಾರಮ್ಮದೇವಿ ದೇವಸ್ಥಾನದ ಗೋಪುರ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಎಚ್.ಡಿ.ದೇವೇಗೌಡ ಅವರು ಸಂಸತ್ತಿಗೆ ಸ್ಪರ್ಧಿಸಿದ್ದ ವೇಳೆ ಮತ ಕೇಳಲು ಈ ಗ್ರಾಮಕ್ಕೆ ಬಂದಿದ್ದೆ. ಆದರೆ, ಈಗ ದೇವೇಗೌಡರು, ನಾವು ಜೊತೆಯಾಗಿಲ್ಲ. ಕಳೆದ ಬಾರಿ ಬಿಟ್ಟರೆ ನಮ್ಮ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿರುವ ಮಳವಳ್ಳಿ ಜನತೆಗೆ ಚಿರಋಣಿ. ಸುಮಲತಾ ಗೆದ್ದಾಗ ಮಾತ್ರ ಇಲ್ಲಿನ ಜನ ನನ್ನ ಮಾತು ಕೇಳಲಿಲ್ಲ. ಹೆಲಿಕಾಪ್ಟರ್ ನೋಡಲು ಒಂದಷ್ಟು ಜನ ಬಿಟ್ಟರೆ ನೂರಾರು ಜನರೂ ಇರಲಿಲ್ಲ. ಜನ ಸೇರಲಿ ಎಂದು ಮುಖಂಡರೊಬ್ಬರ ಮನೆಯಲ್ಲಿ ಕಾದರೂ ಜನ ಬರಲಿಲ್ಲ’ ಎಂದರು.
ಸಿಎಂಗೆ ಧಮ್ ಇಲ್ಲ: ಮಳವಳ್ಳಿ ಪಟ್ಟಣದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕಂಡರೆ ಮುಖ್ಯಮಂತ್ರಿ ಯಡಿಯೂರಪ್ಪ ಗಡ ಗಡ ನಡಗುತ್ತಾರೆ. ತೆರಿಗೆ ಹಣ ಕೇಳುವ ಯಡಿಯೂರಪ್ಪ ಅವರಿಗೆ ಧಮ್ ಇಲ್ಲ. ಧಮ್ ಲೆಸ್, ಹೇಡಿ ಮುಖ್ಯಮಂತ್ರಿ ಯಡಿಯೂರಪ್ಪ. ನಿಮ್ಮ ಶಿಫಾರಸು ನಾನು ಒಪ್ಪಲ್ಲ. ಹಣ ಕೊಡುವುದಿಲ್ಲ ಎಂದು ಹೇಳುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂದೆ ಏಕೆ ನಮ್ಮ ರಾಜ್ಯದ ಪಾಲು ಕೊಡುವುದಿಲ್ಲ ಎಂದು ಕೇಳಿದ್ದೀರಾ? ಈ ತರಹದ ಮುಖ್ಯಮಂತ್ರಿಯನ್ನು ಮೊದಲು ಕಿತ್ತು ಎಸೆಯಬೇಕು’ ಎಂದು ವಾಗ್ದಾಳಿ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.