ಮದ್ದೂರು: ಪಟ್ಟಣದಲ್ಲಿ ಕಸದ ಸಮಸ್ಯೆ ತೀವ್ರವಾಗಿದೆ. ಪ್ರತಿ ವಾರ್ಡ್ನಲ್ಲಿ ಕಸದ ರಾಶಿಗಳ ದರ್ಶನವಾಗುತ್ತದೆ.
ಪ್ರತಿದಿನ ಪೌರಕಾರ್ಮಿಕರು ಮನೆ ಮನೆಗೆ ಭೇಟಿ ನೀಡಿ ಕಸ ಸಂಗ್ರಹಿಸುತ್ತಾರೆ. ಆದರೂ ಕಸದ ಸಮಸ್ಯೆಯಿಂದ ಪಟ್ಟಣವು ಮುಕ್ತವಾಗಿಲ್ಲ.
ಪಟ್ಟಣದ ಪೇಟೆಬೀದಿ, ಲೀಲಾವತಿ ಬಡಾವಣೆಯ ಪಾರ್ಕ್ ಮುಂಭಾಗ, ಹಳೇ ಬಸ್ ನಿಲ್ದಾಣದಿಂದ ಟೀಚರ್ಸ್ ಕಾಲೊನಿಗೆ ಹೋಗುವ ರಸ್ತೆ, ಸರ್ ಎಂ.ವಿಶ್ವೇಶ್ವರಯ್ಯ ನಗರದ ಕೆಲವೆಡೆ, ಶಿವಪುರದ ಸತ್ಯಾಗ್ರಹ ಸೌಧದ ಆಸುಪಾಸು, ರಾಮ್ ರಹೀಂ ನಗರ, ಚನ್ನೇಗೌಡ ಬಡಾವಣೆ, ಕೆ.ಎಚ್.ನಗರಕ್ಕೆ ಹೋಗುವ ಗೊರವನಹಳ್ಳಿ ರಸ್ತೆಯ ನೀರಿನ ಟ್ಯಾಂಕ್ ಬಳಿ, ತಹಶೀಲ್ದಾರ್ ಅವರ ನಿವಾಸದ ಪಕ್ಕದಲ್ಲಿಯೇ ಕಸದ ರಾಶಿಗಳು ಕಾಣುತ್ತವೆ.
ಈ ಭಾಗದ ನಿವಾಸಿಗಳು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪೌರಕಾರ್ಮಿಕರು ಮನೆ ಮನೆಗೆ ಭೇಟಿ ನೀಡಿ ಕಸವನ್ನು ಸಂಗ್ರಹಿಸುತ್ತಾರೆ. ಆದರೆ, ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ.
ಕೆಲ ಬಡಾವಣೆಗಳಲ್ಲಿ ಜನರು ರಸ್ತೆಗೆ ಕಸವನ್ನು ಎಸೆಯುತ್ತಿದ್ದಾರೆ. ಕೆಲ ಮಳಿಗೆಗಳ ಮಾಲೀಕರು ಕಸವನ್ನು ಪೌರಕಾರ್ಮಿಕರಿಗೆ ನೀಡುತ್ತಿಲ್ಲ ಎಂದು ಸ್ಥಳೀಯ ನಿವಾಸಿ ನಾಗರಾಜು ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.