ಮಂಡ್ಯ: ಮಕ್ಕಳ ಹಕ್ಕುಗಳ ಬಗ್ಗೆ ಕಾನೂನು ಜಾರಿಯಾಗಿದ್ದು, ಅದರ ಮೂಲಕ ದೇಶದ ಸಂಪತ್ತಿನಂತಿರುವ ಮಕ್ಕಳ ರಕ್ಷಣೆ ಆಗಬೇಕು ಎಂದು ಪ್ರಧಾನ ಜಿಲ್ಲಾ, ಸೆಷನ್ಸ್ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಕ್ಕಳ ರಕ್ಷಣೆ–108 ಸಹಯೋಗಲ್ಲಿಮಕ್ಕಳ ದಿನಾಚರಣೆ ಅಂಗವಾಗಿ ಜಿಲ್ಲಾ ನ್ಯಾಯಾಲಯ ಆವರಣದಿಂದ ಬಾಲಭ ವನದವರೆಗೆ ಭಾನುವಾರ ಆಯೋಜಿಸಿದ್ದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳನ್ನು ಪೋಷಿಸಿ ಬೆಳೆಸುವುದು ಮುಖ್ಯವಾಗಬೇಕು. ಮಕ್ಕಳ ಪರ ಇರುವ ಕಾನೂನು ಅರಿವು ಎಲ್ಲರಿಗೂ ಇರಬೇಕು. ಇದರಿಂದ ಮಕ್ಕಳ ರಕ್ಷಣೆ ಮಾಡಿದಂತಾಗುತ್ತದೆ.ಉತ್ತಮ ಸಮಾಜ ಕಟ್ಟುವಲ್ಲಿ ಮಕ್ಕಳು ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗಾಗಿ ಅವರ ಹಕ್ಕು ರಕ್ಷಣೆ ಮಾಡುವಲ್ಲಿ ಕಾರ್ಯಕ್ರಮ ಆಯೋಜಿಸುವುದು ಸೂಕ್ತ ಎಂದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಮೂರ್ತಿ ಮಾತನಾಡಿ, ಪ್ರಸ್ತುತದಲ್ಲಿಮಕ್ಕಳ ಹಕ್ಕುಗಳನ್ನು ಕಸಿಯುವಂಥ ಪ್ರಯತ್ನಗಳ ಹೆಚ್ಚಾಗಿ ಆಗುತ್ತಿವೆ. ಮಕ್ಕಳ ಬದುಕನ್ನು ಉತ್ತಮವಾಗಿ ರೂಪಿಸುವಂಥ ವ್ಯವಸ್ಥೆಯಲ್ಲಿ ನಾವೆಲ್ಲರು ತೊಡಗಿಕೊ ಳ್ಳಬೇಕು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಕಾನೂನು ನೆರವು ಪ್ರಾಧಿಕಾರದ ಸಹಯೋಗದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿ ಸಲಾಗಿದ್ದು, ಇದರಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಹಾಗೂ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳನ್ನು ರಕ್ಷಿಸಬೇಕು. ಆ ಮೂಲಕ ಮಕ್ಕಳ ದಿನಾಚರಣೆಗೆ ಅರ್ಥ ಕಲ್ಪಿಸಬೇಕು ಎಂದರು.
ಜಾಥಾ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದು, ಮಕ್ಕಳ ಕುರಿತ ಜಾಗೃತಿ ಫಲಕ ಪ್ರದರ್ಶಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಂ.ನಳಿನಿ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯತೀಶ್, ವಕೀಲರ ಸಂಘದ ಅಧ್ಯಕ್ಷ ಸಿ.ಎಲ್.ಶಿವಕುಮಾರ್, ಜಿಲ್ಲಾ ಮಕ್ಕಳ ತಾಲ್ಲೂಕು ರಕ್ಷಣಾಧಿಕಾರಿ ಎಂ.ಎನ್.ಚೇತನ್ ಕುಮಾರ್, ಜಿಲ್ಲಾ ನ್ಯಾಯಾಧೀಶರಾದ ರವಿಂದ್ರ, ಮಾಲಾ, ವಿಶ್ವನಾಥ್ ಗೌಡರ್, ಶಂಕರ್ ರೆಡ್ಡಿ, ಮಕ್ಕಳ ಸಹಾಯವಾಣಿ ನಿರ್ದೇಶಕರಾದ ಮಿಕ್ಕೆರೆ ವೆಂಕಟೇಶ್, ಮಹೇಶ್ ಚಂದ್ರಗುರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.