ಪಾಂಡವಪುರ: ಡಿ.27ರಂದು ನಡೆ ಯಲಿರುವ ತಾಲ್ಲೂಕಿನ ಗ್ರಾ. ಪಂ.ಚುನಾವಣಾ ಕಣದಲ್ಲಿ ಅಣ್ಣ–ತಮ್ಮಂದಿರು ಎದುರಾಳಿಯಾಗಿದ್ದಾರೆ.
ಪತಿ, ಪತ್ನಿ, ಪುತ್ರ, ಮಾವ, ಸೊಸೆ, ನಾದಿನಿ ವಿವಿಧ ವಾರ್ಡ್ಗಳ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಹಾಲಿ ಮತ್ತು ಮಾಜಿ ಶಾಸಕರ ಸಂಬಂಧಿಕರು, ಪತ್ರಕರ್ತರೂ ಕಣಕ್ಕೆ ಧುಮುಕಿದ್ದಾರೆ.
ಸಹೋದರರ ಸವಾಲು: ಹರವು ಗ್ರಾಮ ಪಂಚಾಯಿತಿಯಲ್ಲಿ ಹರವು ಗ್ರಾಮದ 1ನೇ ವಾರ್ಡ್ನ ಸಾಮಾನ್ಯ ಮೀಸಲು ಕ್ಷೇತ್ರದಿಂದ ಅಣ್ಣ ಜಗದೀಶ್ ರೈತ ಸಂಘದ ಬೆಂಬಲಿತ ಅಭ್ಯರ್ಥಿಯಾದರೆ, ತಮ್ಮ ಸತೀಶ್ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅತ್ತಿಗಾನಹಳ್ಳಿ ಗ್ರಾಮದ ಹಿಂದುಳಿದ ‘ಅ’ ವರ್ಗದಿಂದ ಅಣ್ಣ ಸಿ.ನಾಗರಾಜು ಸ್ಪರ್ಧಿಸಿದ್ದರೆ, ತಮ್ಮ ಸಿ.ಚಂದ್ರು ಅವರು ಅಣ್ಣನ ಎದುರಾಳಿಯಾಗಿದ್ದಾರೆ.
ಗಂಡ, ಹೆಂಡತಿ, ಮಗ ಸ್ಪರ್ಧೆ: ಕೆನ್ನಾಳು ಗ್ರಾಮ ಪಂಚಾಯಿತಿ ಹರಳಹಳ್ಳಿ ಗ್ರಾಮದಲ್ಲಿ ಗಂಡ, ಹೆಂಡತಿ, ಮಗ ಸ್ಪರ್ಧಿಸಿ ಗಮನಸೆಳೆದಿದ್ದಾರೆ. ಹರಳಹಳ್ಳಿ ಗ್ರಾಮದ 1ನೇ ವಾರ್ಡ್ನ ಸಾಮಾನ್ಯ ಮೀಸಲಿನಿಂದ ಸಿ.ಸುಬ್ರಹ್ಮಣ್ಯ (ಅಂಬಿ ಸುಬ್ಬಣ್ಣ) ಸ್ಪರ್ಧಿಸಿದರೆ, ಅವರ ಪತ್ನಿ ಸುಮಿತ್ರಾ ವಿಶ್ವೇಶ್ವರಯ್ಯನಗರದ ಸಾಮಾನ್ಯ ಮಹಿಳೆ ‘ಬ’ ಕ್ಷೇತ್ರದಿಂದ ಹಾಗೂ ಅವರ ಮಗ ಎಸ್.ಅಭಿಷೇಕ್ ಹರಳಹಳ್ಳಿ 2ನೇ ವಾರ್ಡ್ನ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಪ್ರತ್ಯೇಕ ಕಣದಲ್ಲಿ ಮಾವ, ಸೊಸೆ, ನಾದಿನಿ: ಚಿನಕುರಳಿ ಗ್ರಾಮ ಪಂಚಾಯಿ ತಿಯ ಚಿನಕುರಳಿ 1ನೇ ವಾರ್ಡ್ ಮತ್ತು ಕಾಳೇಗೌಡನಕೊಪ್ಪಲು ಗ್ರಾಮದ ಹಿಂದುಳಿದ ‘ಎ’ ಮೀಸಲು ಕ್ಷೇತ್ರಗಳಿಂದ (ಎರಡು ವಾರ್ಡ್ಗಳಲ್ಲೂ) ಪ್ರಕಾಶ್ ಸ್ಪರ್ಧಿಸಿದ್ದರೆ, ಅವರ ಸೊಸೆ ಮೇಘನಾ ಚಿನಕುರಳಿ 4ನೇ ವಾರ್ಡ್ನ ಹಿಂದುಳಿದ ಮಹಿಳೆ ‘ಎ’ ಮೀಸಲಿನಿಂದ ಕಣಕ್ಕೆ ಇಳಿದಿದ್ದಾರೆ. ಪ್ರಕಾಶ್ ಅವರ ನಾದಿನಿ ರಾಣಿ ಲಿಂಗರಾಜು ಚಿನಕುರಳಿ 2ನೇ ವಾರ್ಡ್ನ ಹಿಂದುಳಿದ ಮಹಿಳಾ ಮೀಸಲಿನಿಂದ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ಹಾಲಿ ಮಾಜಿ ಶಾಸಕರ ಸಂಬಂಧಿಕರು ಕಣಕ್ಕೆ: ಶಾಸಕ ಸಿ.ಎಸ್.ಪುಟ್ಟರಾಜು ಅವರ ಸಹೋದರನ ಪುತ್ರ ಸಿ.ಶಿವಕುಮಾರ್ ಚಿನಕುರಳಿ 1ನೇ ವಾರ್ಡ್ ಸಾಮಾನ್ಯ ಮೀಸಲಿನಿಂದ ಕಣಕ್ಕೆ ಇಳಿದರೆ, ಮಾಜಿ ಶಾಸಕ ಕೆ.ಕೆಂಪೇಗೌಡ ಅವರ ಸೊಸೆ ಎಂ.ಆರ್.ಜ್ಯೋತಿ ಚಿನಕುರಳಿ 3ನೇ ವಾರ್ಡ್ನಿಂದ ಆಖಾಡಕ್ಕೆ ಇಳಿದಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆ ಯಲ್ಲಿ ಸಹೋದರ ಸಂಬಂಧಗಳನ್ನು ಲೆಕ್ಕಿಸದೆ ಹಲವರು ಸೆಣಸಾಡುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.