ಶ್ರೀರಂಗಪಟ್ಟಣ: ವಿದ್ಯಾರ್ಥಿಯೊಬ್ಬನ ಮರ್ಮಾಂಗ ಕತ್ತರಿಸಿದ ಪ್ರಕರಣವನ್ನು ಭೇದಿಸಿರುವ ಗ್ರಾಮಾಂತರ ಪೊಲೀಸರು ಶುಕ್ರವಾರ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯ ಸಲಿಂಗಕಾಮಕ್ಕೆ ಬಲಿಯಾಗಿ ವಿದ್ಯಾರ್ಥಿಯೇ ಮರ್ಮಾಂಗ ಕತ್ತರಿಸಿಕೊಂಡ ವಿಷಯ ಬೆಳಕಿಗೆ ಬಂದಿದೆ.
ಪಾಂಡವಪುರ ತಾಲ್ಲೂಕು ಸೀತಾಪುರ ಗ್ರಾಮದ ಕುಮಾರ್ ಅಲಿಯಾಸ್ ಸುನಿ (28) ಬಂಧಿತ ವ್ಯಕ್ತಿ. ಸಂತ್ರಸ್ತ ಬಾಲಕ ನೀಡಿದ ಹೇಳಿಕೆ ಆಧರಿಸಿ ಸುನಿಲ್ಕುಮಾರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿ ಸುನಿಲ್ ಕುಮಾರ್ ಸಲಿಂಗಕಾಮಿಯಾಗಿದ್ದು, ಪ್ರತಿ ಶುಕ್ರವಾರ ಸಂತ್ರಸ್ತ ಬಾಲಕನ ಜತೆಯಲ್ಲಿ ದೇವಾಲಯಗಳ ಸಮೀಪ ಮಲಗುತ್ತಿದ್ದ. ತನಗೆ ದೇವರು ಬರುತ್ತದೆ ಎಂದು ವಿದ್ಯಾರ್ಥಿಯನ್ನು ನಂಬಿಸಿದ್ದ. ಮುಂದೆ ಮದುವೆ ಮಾಡಿಕೊಳ್ಳದೇ ತನ್ನ ಜತೆಯಲ್ಲೇ ಇರಬೇಕು ಎಂದು ಹೆದರಿಸಿದ್ದ. ಮರ್ಮಾಂಗ ಕೊಯ್ದುಕೊಳ್ಳುವಂತೆ ಚಾಕು ಕೊಟ್ಟು, ಜಾಗವನ್ನೂ ತೋರಿಸಿದ್ದ. ಬಾಲಕನೇ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸುಳ್ಳು ಮಾಹಿತಿ: ಫೆ.14ರಂದು ಡಿಪ್ಲೊಮಾ ವಿದ್ಯಾರ್ಥಿಯನ್ನು ಡ್ರಾಪ್ ಕೊಡುವ ನೆಪದಲ್ಲಿ ಮೂವರು ದುಷ್ಕರ್ಮಿಗಳು ಕಾರ್ಗೆ ಹತ್ತಿಸಿಕೊಂಡಿದ್ದರು. ನಂತರ ಮರ್ಮಾಂಗ ಕತ್ತರಿಸಿ ಕೆಳಗೆ ಇಳಿಸಿ ಹೋಗಿದ್ದರು ಎಂದು ದೂರು ದಾಖಲಾಗಿತ್ತು. ವಿದ್ಯಾರ್ಥಿ ಹೇಳಿಕೆ ಆದರಿಸಿ ದೂರು ದಾಖಲು ಮಾಡಲಾಗಿತ್ತು. ಆದರೆ ವಿಚಾರಣೆ ವೇಳೆ ಇದು ಸುಳ್ಳು ಎಂದು ತಿಳಿದು ಬಂದಿದೆ.
ಆರೋಪಿ ವಿದ್ಯಾರ್ಥಿಯನ್ನು ಎಲೆಕೆರೆ ಹ್ಯಾಂಡ್ಪೋಸ್ಟ್ ಬಳಿ ಕರೆದುಕೊಂಡು ಹೋಗಿ ಮರ್ಮಾಂಗ ಕತ್ತರಿಸಿಕೊಳ್ಳಲು ಪ್ರಚೋದನೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮಾಂತರ ಠಾಣೆ ಎಸ್ಐ ಕೆ.ಎಸ್. ಗಿರೀಶ್ ಅವರ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿತ್ತು. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಬಾಲಕನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು ಅಪಾಯದಿಂದ ಪಾರಾಗಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.