ಕೆ.ಆರ್.ಪೇಟೆ: ಸಹಕಾರ ಇಲಾಖೆಯ ಉಪ ನಿಬಂಧಕರನ್ನು ಪ್ರತಿಭಟನೆಯ ಸಂದರ್ಭದಲ್ಲಿ ಶಾಸಕ ಎಚ್.ಟಿ.ಮಂಜು ಏಕವಚನದಿಂದ ನಿಂದಿಸಿ ಅಧಿಕಾರಿಯ ಘನತೆಗೆ ಕುಂದು ತಂದಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ (ಡಿಸಿಸಿ) ಅಧ್ಯಕ್ಷ ಸಿ.ಡಿ.ಗಂಗಾಧರ್ ಟೀಕಿಸಿದರು.
ಪಟ್ಟಣದದಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ಪಾಂಡವಪುರ ಉಪ ವಿಭಾಗದ ಸಹಕಾರ ಉಪ ನಿಬಂಧಕರು ತಮಗೆ ಬಂದ ದೂರಿನ ಅನ್ವಯ ಕ್ರಮ ಕೈಗೊಂಡಿದ್ದಾರೆ. ಅದರಲ್ಲಿ ಲೋಪಗಳಾಗಿದ್ದರೆ ಮೇಲಧಿಕಾರಿಗಳಲ್ಲಿ ಅಥವಾ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕು. ಕಾರ್ಯಕರ್ತರ ಜತೆ ಕಚೇರಿಗೆ ತೆರಳಿ ಅಧಿಕಾರಿಯನ್ನು ಏಕವಚನದಲ್ಲಿ ನಿಂದಿಸಿರುವದನ್ನು ಪಕ್ಷ ಖಂಡಿಸುತ್ತದೆ’ ಎಂದರು. ಜಾತಿಯ ದೃಢೀಕರಣ ಪತ್ರ ತಂದೆ ಮತ್ತು ಮಕ್ಕಳಿಗೆ ಒಂದೇ ರೀತಿ ಇರುತ್ತದೆ. ಒಬ್ಬೊಬ್ಬರು ಒಂದೊಂದು ಜಾತಿ ಹೇಗೆ ಆಗುತ್ತಾರೆ ಎಂದು ಅಧಿಕಾರಿಗಳು ನೋಟೀಸ್ ನೀಡಿ ನಿರ್ದೇಶಕ ಸ್ಥಾನವನ್ನು ಅಮಾನ ಮಾಡಿಸುವ ಸಮಸ್ಯೆಯನ್ನು ನ್ಯಾಯಾಲಯದಲ್ಲಿ ಪರಿಹರಿಸಿಕೊಳ್ಳಬೇಕು ಎಂದರು.
ತಾಲ್ಲೂಕಿನಲ್ಲಿ ಜೆಡಿಎಸ್ ಸೋಲಿನಿಂದ ಶಾಸಕ ಎಚ್.ಟಿ.ಮಂಜು ವರ್ಚಸ್ಸು ಕುಸಿದಿದೆ. ಡಿಸಿಸಿ ಬ್ಯಾಂಕ್, ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಶೀಳನೆರೆ ಅಂಬರೀಶ್ ಮಾತನಾಡಿದರು. ಪ್ರಮುಖರಾದ ಅಗ್ರಹಾರಬಾಚಹಳ್ಳಿ ಕುಮಾರ್, ಕಬ್ಬಲಗೆರೆಪುರ ಪುಟ್ಟಸ್ವಾಮೀಗೌಡ, ಎಚ್.ಎನ್.ಪ್ರವೀಣ್, ಸಿ.ಆರ್.ರಮೇಶ್, ಚೇತನಾಮಹೇಶ್, ಬಸ್ತಿರಂಗಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.