ಮಳವಳ್ಳಿ: ಬಡ್ತಿ ನಿಲ್ಲಿಸಿ, ಕೂಡಲೇ ಒಳ ಮೀಸಲಾತಿ ಜಾರಿಗೆ ಮಾಡದಿದ್ದಲ್ಲಿ ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಚುನಾವಣೆಗಳಲ್ಲಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ತಕ್ಕಪಾಠ ಕಲಿಸುತ್ತೇವೆ ಎಂದು ಒಳ ಮೀಸಲಾತಿ ಹೋರಾಟಗಾರ ಬಿ.ಆರ್.ಭಾಸ್ಕರ್ ಪ್ರಸಾದ್ ಎಚ್ಚರಿಕೆ ನೀಡಿದರು.
ಮೈಸೂರಿನ ಚಾಮುಂಡಿ ಬೆಟ್ಟದಿಂದ ಒಳಮೀಸಲಾತಿಗಾಗಿ ಆರಂಭವಾಗಿ ಕ್ರಾಂತಿಕಾರಿ ಪಾದಯಾತ್ರೆ(ಅರೆಬೆತ್ತಲೆ) ಮಳವಳ್ಳಿಗೆ ಆಗಮಿಸಿದ ವೇಳೆ ಪ್ರವಾಸಿ ಮಂದಿರ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
‘ಸರ್ಕಾರ ಕುಂಟುನೆಪವೊಡ್ಡಿ ಒಳಮೀಸಲಾತಿ ನೀಡದೇ ವಂಚಿಸುತ್ತಿದೆ. ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಜಾರಿಯಾಗಬೇಕು. ಇಂಥ ನಿರ್ಲಕ್ಷ್ಯದ ವಿರುದ್ಧ ಹೋರಾಟದ ಸ್ವರೂಪ ಬದಲಿಸಿ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ಗೆ ತಕ್ಕಪಾಠ ಕಲಿಸಬೇಕಾಗುತ್ತದೆ. ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಶಿಫಾರಸು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕ್ರಾಂತಿಕಾರಿ ಅರೆಬೆತ್ತಲೆ, ಉರುಳು ಸೇವೆ, ಮೈಮೇಲೆ ಮಲ ಸುರಿದುಕೊಳ್ಳುವುದಂಥ ಅನೇಕ ಹೋರಾಟ ನಡೆಸಬೇಕಾಗುತ್ತದೆ’ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರಕ್ಕೆ ಮತ ನೀಡಿದ ತಪ್ಪಿಗೆ ಮುಂದಿನ ದಿನಗಳಲ್ಲಿ ಛಡಿ ಏಟನ್ನು ನಮಗೆ ನಾವೇ ಹೊಡೆದುಕೊಳ್ಳುತ್ತೇವೆ. ನಿರಂತರ ಹೋರಾಟದಿಂದಾಗಿ ಸರ್ಕಾರ ಒಳ ಮೀಸಲಾತಿ ಜಾರಿ ಮಾಡುವ ಭರವಸೆ ನೀಡಿ ಜನಗಣತಿಗೆ ಆದೇಶಿಸಿದೆ. ಆದರೆ ಸಮಾಜದ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳು, ಬಡ್ತಿ ಮೀಸಲಾತಿ ಮತ್ತು ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬಲು ಮುಂದಾಗಿದ್ದಾರೆ. ಇದು ಮಾದಿಗ ಸಮುದಾಯವನ್ನು ಸಮಾನತೆಯಿಂದ ವಂಚಿಸುವ ತಂತ್ರಗಾರಿಕೆಯಾಗಿದೆ’ ಎಂದು ಆರೋಪಿಸಿದರು.
‘ಒಳ ಮೀಸಲಾತಿ ಜಾರಿಯ ಬಳಿಕ ಯಾವುದೇ ಹುದ್ದೆಗಳನ್ನು ತುಂಬಿದರೂ ನಮ್ಮ ಅಭ್ಯಂತರವಿಲ್ಲ, ಮೀಸಲಾತಿ ಜಾರಿ ಮಾಡದೆ ಹೊಸ ನೇಮಕಾತಿ, ಬ್ಯಾಕ್ಲಾಗ್ ಮತ್ತು ಬಡ್ತಿ ಮೀಸಲಾತಿ ಜಾರಿ ಮಾಡಿದ್ದಲ್ಲಿ ರಾಜ್ಯದ ಮಾದಿಗ ಸಮುದಾಯವು ಉಗ್ರ ಹೋರಾಟ ನಡೆಸುತ್ತದೆ. ಒಳ ಮೀಸಲಾತಿ ಜಾರಿಯಾಗುವವರೆಗೂ ಪ್ರತಿಭಟನೆ ಮುಂದುವರಿಯಲಿದೆ’ ಎಂದು ಎಚ್ಚರಿಸಿದರು.
ಹಾಡ್ಲಿ ಗ್ರಾ.ಪಂ.ಅಧ್ಯಕ್ಷ ನಡಕಲಪುರ ಮಂಜುನಾಥ್, ಮುಖಂಡರಾದ ಕೃಷ್ಣಮೂರ್ತಿ, ರಮೇಶ್, ಶಿವನಂದ್, ಶಾಂತಕುಮಾರ್, ಅರುಣ್ ಹಾಗೂ ಒಳ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.