ಮೇಲುಕೋಟೆ: ಪಾಂಡವಪುರ ತಾಲ್ಲೂಕಿನ ಸಿಂಗ್ರೀಗೌಡನಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನ ಆಚರಿಸದೆ ಶಾಲೆಗೆ ರಜೆ ಘೋಷಣೆ ಮಾಡಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನಿರ್ಮಲಮೇರಿ ಅವರ ವಿರುದ್ಧ ಗ್ರಾಮಸ್ಥರು ಆರೋಪ ಮಾಡಿದ್ದಾರೆ.
‘ಶಾಲೆಯಲ್ಲಿ ಸುಮಾರು 15 ವಿದ್ಯಾರ್ಥಿಗಳು ಇದ್ದು, ಅವರು ಸ್ವಾತಂತ್ರ್ಯದ ಸಂಭ್ರಮದಿಂದ ವಂಚಿತರಾ ಗಿದ್ದಾರೆ. ಶಾಲೆಯಲ್ಲಿ ಸ್ವಾತಂತ್ರ್ಯದ ಆಚರಣೆ ಬಗ್ಗೆ ಎಸ್ಡಿಎಂಸಿ ಆಡಳಿತ ಮಂಡಳಿ ಗಮನಕ್ಕೂ ತಿಳಿಸದೆ ಮಕ್ಕಳಿಗೆ ರಜೆ ನೀಡಿರುವ ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಶಾಲೆಯಲ್ಲಿ ಬಾವುಟ ಇಲ್ಲದೆ ಇರುವುದನ್ನು ಗಮಿನಿಸಿ ಶಾಲೆಯ ಕಟ್ಟಡದ ಮೇಲೆ ನಾವೇ ಬಾವುಟ ಹಾರಿಸಿದ್ದೇವೆ. ಈ ಬಗ್ಗೆ ಶಾಸಕ ಸಿ.ಎಸ್.ಪುಟ್ಟರಾಜು, ಬಿಇಒ ಲೋಕೇಶ್ ಅವರಿಗೆ ದೂರು ನೀಡಿದ್ದೇವೆ. ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ಗ್ರಾಮದ ಮುಖಂಡರಾದ ಸಣ್ಣೇಗೌಡ, ಎಸ್.ಸಿಂಗ್ರೀಗೌಡ, ಪುಟ್ಟರಾಜು, ಪುಟ್ಟಸ್ವಾಮಿಗೌಡ, ಚೆಲುವರಾಜು, ಹರೀಶ್, ಮೋಹನ್ ಕುಮಾರ್, ಲೋಕೇಶ್, ಸುರೇಶ್, ಹರೀಶ್ ಎಸ್., ವರುಣ, ರಮೇಶ್, ಕುಮಾರ್ ಎನ್.ಪಿ, ಉದಯ ಆಗ್ರಹಿಸಿದರು.
ಶಾಲೆಯಲ್ಲಿ ಧ್ವಜಾರೋಹಣ ಮಾಡದೆ ಇರುವ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಮಂಡ್ಯ ಸಿಇಒ ಅವರಿಗೆ ವರದಿ ನೀಡಿದ್ದೇನೆ. ಶಿಕ್ಷಕಿ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಇಒಲೋಕೇಶ್ ತಿಳಿಸಿದರು.
ಎಲ್ಲ ಶಾಲೆಗಳಲ್ಲಿಯೂ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ಮಾಡುವಂತೆ ಆದೇಶ ಮಾಡಲಾಗಿದೆ. ಶಿಕ್ಷಕಿ ಧ್ವಜಾರೋಹಣ ನೆರವೇರಿಸದೆ ಇರುವುದು ಖಚಿತವಾದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಹ ಶೀಲ್ದಾರ್ ನಯನಾ ತಿಳಿಸಿದರು.ಮಾಹಿತಿ ಪಡೆಯಲು ಶಿಕ್ಷಕಿ ಲಭ್ಯವಾಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.