ಮಂಡ್ಯ: ಇಲ್ಲಿನ ಅರಕೇಶ್ವರ ನಗರದಲ್ಲಿ ಸೋಮವಾರ ಅರಕೇಶ್ವರ ಸ್ವಾಮಿಯ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಸೋಮವಾರ ಬೆಳಿಗ್ಗೆ 9.40ರಿಂದ 10.24ರವರೆಗಿನ ಶುಭ ಮೇಷ ಲಗ್ನದಲ್ಲಿ ಸ್ವಾಮಿಯ ರಥೋತ್ಸವ ಜರುಗಿತು. ಜಿಲ್ಲೆಯ ನಾನಾ ಭಾಗಗಳಿಂದ ಬಂದಿದ್ದ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು. ಸ್ಥಳೀಯರು ಭಕ್ತರಿಗೆ ನೀರು, ಮಜ್ಜಿಗೆ, ಪಾನಕ ವಿತರಿಸಲಾಯಿತು.
ದೇವಾಲಯದ ಇಒ ಅರವಿಂದ್ ಬಾಬು ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ಅನುಚಾನ ಪದ್ಧತಿಯಂತೆ ಆಚಾರ್ ಸಮುದಾಯದವರು ತೇರು ಎಳೆದು ಮುಂದೆ ಸಾಗಲು ಅನುವು ಮಾಡಿಕೊಟ್ಟರು. ನಗರಸಭೆ ಸದಸ್ಯರು, ದೇಗುಲದ ಅಧಿಕಾರಿಗಳು, ಗುತ್ತಲು ಗ್ರಾಮದ ಯಜಮಾನರು, ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
ಭಾನುವಾರ ಪಂಚಾಮೃತ ಅಭಿಷೇಕ, ರಥದ ಕಳಸ ಪೂಜೆ ಮತ್ತು ಸ್ಥಾಪನೆ, ಸ್ವಾಮಿಯ ಕಾಶಿಯಾತ್ರೆ ಉತ್ಸವ ಹಾಗೂ ರಾತ್ರಿ ಗಿರಿಜಾ ಕಲ್ಯಾಣೋತ್ಸವ, ಗಜಾರೋಹಣ ಉತ್ಸವ ನಡೆದವು. ಸೋಮವಾರ ಬೆಳಗ್ಗೆ ರಥೋತ್ಸವಕ್ಕೂ ಮುನ್ನ ಮುಂಜಾನೆ 5ಕ್ಕೆ ರಥಕ್ಕೆ ಬಲಿಪೂಜೆ, ಪಂಚಾಮೃತ ಅಭಿಷೇಕ, ರಥದ ಪೂಜೆ, ದೇವರ ಮನೆಯಲ್ಲಿ ಮಂಟಪೋತ್ಸವ, ತೇರಡಿ ಉತ್ಸವ ನಡೆಯಿತು.
ಮಾರ್ಚ್ 10ರಂದು ಶಯನೊತ್ಸವ, 11ರಂದು ವಸಂತೋತ್ಸವ, ಪಂಚಾಮೃತ ಅಭಿಷೇಕ, ರಾತ್ರಿ ಅಭಿಷೇಕ, ಪುಷ್ಪ ಪಲ್ಲಕ್ಕಿ ಉತ್ಸವ, 12ರಂದು ಮಹಾಭಿಷೇಕ ಮತ್ತು ದೇವಸ್ಥಾನದ ಪ್ರಕಾರದಲ್ಲಿ ಉತ್ಸವ ಆಯೋಜಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.