ADVERTISEMENT

ಕನ್ನಡದಲ್ಲಿ ಮಾತಾಡಿ ಜಾನಪದಕ್ಕೆ ಬಲ ತುಂಬಿ

ಕಾರ್ಯಕ್ರಮದಲ್ಲಿ ‘ಜಾನಪದ ಜನ್ನೆಯರು’ ಸಂಸ್ಥೆ ಅಧ್ಯಕ್ಷೆ ಡಾ.ಸುಜಾತಾ ಅಕ್ಕಿ ಸಲಹೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 10:37 IST
Last Updated 4 ನವೆಂಬರ್ 2019, 10:37 IST
ಮಂಡ್ಯದ ಕೆವಿಎಸ್‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನಪದ ಗಾಯಕಿ ಪುಟ್ಟಮ್ಮ ಅವರಿಗೆ ಜಾನಪದ ಜನ್ನೆ ಪ್ರಶಸ್ತಿ ಪ್ರದಾನ ಮಾಡಲಾಯಿತು
ಮಂಡ್ಯದ ಕೆವಿಎಸ್‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನಪದ ಗಾಯಕಿ ಪುಟ್ಟಮ್ಮ ಅವರಿಗೆ ಜಾನಪದ ಜನ್ನೆ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಮಂಡ್ಯ: ಜಾನಪದ ನೆಲೆ ಇರುವುದು ನಮ್ಮ ಮಾತೃ ಭಾಷೆಯಲ್ಲಿ, ಇತ್ತೀಚಿನ ದಿನಗಳಲ್ಲಿ ಅದನ್ನು ಮರೆಯುತ್ತಿದ್ದೇವೆ ಎಂದು ಜಾನಪದ ಜನ್ನೆಯರು ಸಂಸ್ಥೆ ಅಧ್ಯಕ್ಷೆ ಡಾ.ಸುಜಾತಾ ಅಕ್ಕಿ ಹೇಳಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಭಾನುವಾರ ನಡೆದ ಜಾನಪದ ಜನ್ನೆಯರು ಸಂಸ್ಥೆ ಉದ್ಘಾಟನೆ ಹಾಗೂ ಜಾನಪದ ಜನ್ನೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ
ಮಾತನಾಡಿದರು.

ನಿತ್ಯ ಜೀವನದಲ್ಲಿ ಇಂಗ್ಲಿಷ್‌ನ ಮಮ್ಮಿ, ಡ್ಯಾಡಿ, ಅಂಕಲ್‌, ಆಂಟಿ ಪದಗಳೇ ಹೆಚ್ಚು ಹಾಸುಹೊಕ್ಕಾಗಿವೆ. ನಮ್ಮ ಮಾತೃ ಭಾಷೆ ಮರೆಮಾಚಲಾಗುತ್ತಿದೆ. ನಮ್ಮ ಭಾಷೆಯಲ್ಲೇ ಮಾತಾಡಿದರೆ ಜಾನಪದಕ್ಕೆ ಒಂದು ಗಟ್ಟಿ ನೆಲೆ ಎಂಬುದು ಸಿಗುತ್ತದೆ. ಎಲ್ಲರೂ ಕನ್ನಡದಲ್ಲಿ ಮಾತನಾಡುವ ಮೂಲಕ ಜಾನಪದಕ್ಕೆ ಇನ್ನಷ್ಟು ಬಲ ತುಂಬಬೇಕಿದೆ ಎಂದು ಹೇಳಿದರು.

ADVERTISEMENT

ಜಾನಪದದಲ್ಲಿ ಎಲ್ಲವೂ ಸರಿ ಇದೆ ಎಂದು ಹೇಳಲಾಗುವುದಿಲ್ಲ. ಅಸಮಾನತೆ, ಮೌಢ್ಯ ಸಾಕಷ್ಟು ಇದೆ. ಮಹಿಳೆಯರನ್ನು ಶೋಷಣೆ ಮಾಡುತ್ತಿದ್ದರು ಎಂಬುದಕ್ಕೆ ಅದಕ್ಕೆ ಸಂಬಂಧಿಸಿದಂತೆ ಇರುವ ಗಾದೆಗಳೇ ಸಾಕ್ಷಿ. ಇದರ ಹೊರತಾಗಿ ಆಪ್ತ, ಮುಕ್ತ, ಮಾನವೀಯ ನೆಲೆಗಟ್ಟಿನ ಮೇಲೆ ಸಾಂಸ್ಕೃತಿಕ ವಿನಿಮಯದ ಮೂಲಕ ಜಾನಪದವನ್ನು ಬೆಳೆಸುವ ಅನಿವಾರ್ಯತೆ ಇದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಆಗಿರುವ ಜಾನಪದ ಕೆಲಸಗಳು ದೇಶದ ಬೇರೆ ಯಾವುದೇ ಭಾಗದಲ್ಲಿ ಕಾಣಲು ಸಾಧ್ಯವಿಲ್ಲ. ರಾಜ್ಯದಲ್ಲಿ ಸಾಹಿತ್ಯಕ್ಕಿಂತ ಜಾನಪದ ವಿದ್ವಾಂಸರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮುಂದಿನ ಪೀಳಿಗೆಗೆ ಜಾನಪದ ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ಕಟ್ಟಿಕೊಡಬೇಕು. ಸಾಂಸ್ಕೃತಿವಾಗಿ ಗಟ್ಟಿಯಾಗಿರುವ ಜಾನಪದವನ್ನು ಶೈಕ್ಷಣಿಕವಾಗಿ ಪಠ್ಯಕ್ಕೆ ಅಳವಡಿಸುವ ಮೂಲಕ ಇನ್ನಷ್ಟು ಬಲಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಧ್ಯೇಯವಾಕ್ಯ, ಲಾಂಛನ, ನಾಮಫಲಕವನ್ನು ಅನಾವರಣಗೊಳಿದ ಕರ್ನಾಟಕ ಜಾನಪದ ಪರಿಷತ್‌ ಅಧ್ಯಕ್ಷ ಟಿ.ತಿಮ್ಮೇಗೌಡ, ಜಾನಪದ ನಿಂತ ನೀರಲ್ಲ. ಅದನ್ನು ಬೆಳೆಸಲು ಹಲವರು ಶ್ರಮಿಸಿದ್ದಾರೆ. ಜಾನಪದದಲ್ಲಿ ಹೆಚ್ಚೆಚ್ಚು ಸಂಶೋಧನೆಗಳಾಗಬೇಕಿದೆ ಎಂದು ಹೇಳಿದರು.

ಜನಪದ ಗಾಯಕಿ ಕಂದೇಗಾಲ ಪುಟ್ಟಮ್ಮ ಅವರಿಗೆ 2019ನೇ ಸಾಲಿನ ‘ಜಾನಪದ ಜನ್ನೆ’ ಪ್ರಶಸ್ತಿ, ₹5 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಮಾಜಿ ಸಚಿವೆ ಡಾ.ಮೋಟಮ್ಮ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ, ಜಿ.ಪಂ ಸಿಇಒ ಕೆ.ಯಾಲಕ್ಕಿಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‌ ಗೌಡ, ಸಂಸ್ಥೆಯ ಗೌರವ ಸಲಹೆಗಾರರಾದ ಡಾ.ಟಿ.ಜಯಲಕ್ಷ್ಮಿ ಸೀತಾಪುರ, ಉಪಾಧ್ಯಕ್ಷೆ ಡಾ.ಎಸ್‌.ಸಿ.ಮಂಗಳಾ, ಸಂಸ್ಥಾಪಕ ಕಾರ್ಯದರ್ಶಿ ಡಾ.ಎಂ.ಕೆಂಪಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.