ಮಂಡ್ಯ: ನಟ ಕಮಲ್ ಹಾಸನ್ ಅವರ ‘ಥಗ್ ಲೈಫ್’ ಸಿನಿಮಾ ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ ನೀಡಬಾರದು, ಜೊತೆಗೆ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಮಲ್ ಹಾಸನ್ ಅವರ ಪ್ರತಿಕೃತಿ ಹಾಗೂ ಅವರ ಭಾವಚಿತ್ರ ದಹಿಸಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಜೆ.ಸಿ. ವೃತ್ತದ ಬಳಿ ಜಮಾವಣೆಗೊಂಡ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
‘ಕನ್ನಡ ಭಾಷೆಯು ತಮಿಳುಭಾಷೆಯಿಂದ ಉಗಮವಾಯಿತು ಎನ್ನುವ ಲಜ್ಜೆಗೇಡಿತನದ ಹೇಳಿಕೆಯನ್ನು ಕಮಲ್ ಹಾಸನ್ ನೀಡಿದ್ದಾರೆ, ಇದು ತಪ್ಪು ಮತ್ತು ದುರುದ್ದೇಶದ ಹೇಳಿಕೆಯಾಗಿದೆ. ಇದರಿಂದ ಕನ್ನಡಿಗರಿಗೆ ನೋವುಂಟಾಗಿದೆ. ತಕ್ಷಣ ಕನ್ನಡಿಗರ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.
ಕಮಲ್ ಹಾಸನ್ ಅವರ ಥಗ್ ಲೈಫ್ ಚಿತ್ರವು ಕರ್ನಾಟದಲ್ಲಿ ಜೂ 5ರಂದು ತೆರೆ ಕಾಣಲಿದ್ದು, ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಜೊತೆಗೆ ವಿರೋಧಿಸಿ ಬಿಡುಗಡೆಗೆ ಅವಕಾಶವನ್ನೇ ನೀಡುವುದಿಲ್ಲ. ಕರ್ನಾಟಕದಲ್ಲಿ ಇವರ ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಡಬಾರದು ಎಂಬುದನ್ನು ಆಗ್ರಹಿಸುತ್ತೇವೆ. ಮೊತ್ತೊಮ್ಮೆ ಇಂತಹ ಅಸಂಬದ್ಧ ಹೇಳಿಕೆ ನೀಡುವುದನ್ನು ಕಮಲ್ ಹಾಸನ್ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ವೇಣುಗೋಪಾಲ್, ಮುಖಂಡರಾದ ಸುಜಾತಾ ಕೃಷ್ಣ, ಮಾ.ಸೋ. ಚಿದಂಬರ್, ಜೈಶಂಕರ್, ಅಶೋಕ್, ಭಾರತಿ, ಶಂಕರೇಗೌಡ, ರಾಮಚಂದ್ರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.