ಕಿಕ್ಕೇರಿ: ಇಡೀ ತಾಲ್ಲೂಕಿನಲ್ಲಿ ಹೋಬಳಿ ಕೇಂದ್ರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಯಶಸ್ವಿಯಾಗಿ ಗರ್ಭಿಣಿಯರ ಹೆರಿಗೆಯ ಶಸ್ತ್ರಚಿಕಿತ್ಸೆ ಮಾಡಿರುವುದು ಸಂತಸ ತಂದಿದೆ ಎಂದು ಕಿಕ್ಕೇರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪ್ರಸೂತಿ ತಜ್ಞೆ ಡಾ. ಸೌಜನ್ಯ ಎಸ್. ವಲ್ಕೆ ತಿಳಿಸಿದರು.
ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಅರ್ಹ ಗರ್ಭಿಣಿಯರಿಗೆ ಪ್ರಸೂತಿ ಶಸ್ತಚಿಕಿತ್ಸೆ ಮಾಡಿ ಅವರು ಮಾತನಾಡಿದರು.
ಹೋಬಳಿ ಹಂತದಲ್ಲಿನ ಮೊಟ್ಟಮೊದಲ ಶಸ್ತ್ರಚಿಕಿತ್ಸೆ ಇದಾಗಿದೆ. ಇಡೀ ಸಿಬ್ಬಂದಿ ವರ್ಗದವರಿಗೆ ಬಹಳ ಸಂತಸ ತಂದಿದೆ. ಇದುವರೆಗೂ ಹಳ್ಳಿಗಾಡಿನ ಬಡ, ದುರ್ಬಲ ಸಮುದಾಯದವರು ಖಾಸಗಿ ಆಸ್ಪತ್ರೆ, ದೂರದ ತಾಲ್ಲೂಕು ಕೇಂದ್ರಗಳಿಗೆ ತೆರಳಬೇಕಿತ್ತು. ಇಂತಹ ಸಂದಿಗ್ಧತೆ ದೂರವಾಗಿದೆ. ತಮ್ಮಲ್ಲಿ ನುರಿತ ವೈದ್ಯರು, ಉಪಕರಣ, ಸಿಬ್ಬಂದಿ ತಂಡವಿದ್ದು ಸಾರ್ವಜನಿಕರು ಈ ಆರೋಗ್ಯ ಸೇವೆಯನ್ನು ಸದ್ಭಳಕೆ ಮಾಡಿಕೊಳ್ಳಿ ಎಂದರು.
ಈ ಮೊದಲು ಸಾಮಾನ್ಯ ಹೆರಿಗೆ ಸೇವೆ ಆಸ್ಪತ್ರೆಯಲ್ಲಿತ್ತು. ಈಗ ಗಂಡಾಂತರಕಾರಿ ಹೆಚ್ಚಿನ ಅಪಾಯಕರ ಸ್ಥಿತಿಯಲ್ಲಿನ ಸಿಜೇರಿಯನ್ ಶಸ್ತ್ರಚಿಕಿತ್ಸೆಯನ್ನು ಈ ಆರೋಗ್ಯ ಕೇಂದ್ರದಲ್ಲಿಯೇ ಮಾಡಲಾಗುತ್ತಿದೆ. ಪ್ರತಿ ತಿಂಗಳು 9ರಂದು ಪಿಎಂಎಸ್ಎಂಎ(ಪ್ರಧಾನ ಮಂತ್ರಿ ಸುರಕ್ಷಿತ್ ಮಾತೃತ್ವ್ಯ ಅಭಿಯಾನ) ಗರ್ಭಿಣಿಯರಿಗೆ ಆರೋಗ್ಯ ತಪಾಸಣೆ, ಸಲಹೆ ನೀಡಲಾಗುತ್ತಿದೆ. ಹೈರಿಸ್ಕ್ ಸ್ಥಿತಿ ಇದ್ದಲ್ಲಿ ನೆಗೆಟಿವ್, ರಕ್ತ, ಸಕ್ಕರೆ, ಬಿಪಿ ಸಮಸ್ಯೆ ಇದ್ದವರಿಗೆ ಪ್ರತಿ ತಿಂಗಳು 24ರಂದು ಹೆಚ್ಚಿನ ತಪಾಸಣೆ ಮಾಡಲಾಗುವುದು. ಭಯ ಬಿಡಿ. ತಾಯಿ, ಮಗುವಿನ ಆರೋಗ್ಯ ಆರೈಕೆಗೆ ಸದಾ ಬದ್ಧವಿರುವುದಾಗಿ ನುಡಿದರು.
ಗರ್ಭಿಣಿಯರು ಕಬ್ಬಿಣ, ಕ್ಯಾಲ್ಸಿಯಂ, ಪ್ರೋಟೀನ್ಯುಕ್ತ, ಪೋಷಕಾಂಶ ಭರಿತ ಆಹಾರ ಸೇವನೆಗೆ ಕಾಳಜಿ ವಹಿಸಬೇಕಿದೆ. ಇದು ತಾಯಿ, ಹುಟ್ಟುವ ಮಗುವಿನ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದರು.
ಅರ್ಹ ಗರ್ಭಿಣಿಯರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಹೆರಿಗೆ ಮಾಡಿಸಲಾಯಿತು.
ಮಕ್ಕಳ ತಜ್ಞ ಡಾ. ಚಂದನ್, ಅರಿವಳಿಕೆ ತಜ್ಞ ಡಾ. ತ್ಯಾಗರಾಜ್, ಆರೋಗ್ಯ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.