ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಬೃಂದಾವನ ಪ್ರವೇಶ ದರ ಇಳಿಕೆ

ಪ್ರಜಾವಾಣಿ ವರದಿ ಪರಿಣಾಮ: ಬೃಂದಾವನ ಪ್ರವೇಶ ದರ ಇಳಿಕೆ

​ಪ್ರಜಾವಾಣಿ ವಾರ್ತೆ
Published 6 ಮೇ 2025, 14:44 IST
Last Updated 6 ಮೇ 2025, 14:44 IST
   

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆಯ ವಿಶ್ವವಿಖ್ಯಾತ ‘ಬೃಂದಾವನ’ ಉದ್ಯಾನದ ಪ್ರವೇಶ ಶುಲ್ಕವನ್ನು ಇಳಿಕೆ ಮಾಡಲಾಗಿದ್ದು, ಮೇ 7ರಿಂದ ಈ ಮೊದಲು ಇದ್ದಂತೆ ತಲಾ ಪ್ರವಾಸಿಗರಿಂದ ₹50 ಮಾತ್ರ ಪಡೆಯಲು ಕಾವೇರಿ ನೀರಾವರಿ ನಿಗಮ ಮುಂದಾಗಿದೆ.

ಮೇ 1ರಿಂದ ಪ್ರವೇಶ ಶುಲ್ಕ, ವಾಹನ ಪಾರ್ಕಿಂಗ್‌, ಟೋಲ್‌ ದರವನ್ನು ಎರಡು ಪಟ್ಟು ಹೆಚ್ಚಳ ಮಾಡಲಾಗಿತ್ತು. ಅದರಲ್ಲೂ ಆರು ವರ್ಷದೊಳಗಿನ ಮಕ್ಕಳಿಗೆ ₹10ರಿಂದ ₹50ಕ್ಕೆ ಏರಿಕೆ ಮಾಡಲಾಗಿತ್ತು.

ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ‘ಬೃಂದಾವನ ಪ್ರವೇಶ ದರ ದುಪ್ಪಟ್ಟು’ ವಿಶೇಷ ವರದಿ ಪ್ರಕಟವಾದ ಬೆನ್ನಲ್ಲೇ, ದರ ಏರಿಕೆ ಬಗ್ಗೆ ಸಾರ್ವಜನಿಕರು ಮತ್ತು ಪ್ರವಾಸಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ‘ಪ್ರವಾಸಿಗರನ್ನು ಸುಲಿಗೆ ಮಾಡುತ್ತಿರುವ ದರಾಸುರ ಸರ್ಕಾರ’ ಎಂದು ಜೆಡಿಎಸ್‌ ಕೂಡ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.

ADVERTISEMENT

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರೈತ ಸಂಘದ ವತಿಯಿಂದ ಬೃಂದಾವನ ಮುಂಭಾಗ ಮಂಗಳವಾರ ಪ್ರತಿಭಟನೆಯೂ ನಡೆಯಿತು. ‘ಪ್ರವಾಸಿಗರಿಂದ ಮಿತಿ ಮೀರಿದ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಇದು ಹೊರೆಯಾಗಿದೆ. ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸಿಲ್ಲ. ಸಿಸಿಟಿವಿ ಕ್ಯಾಮೆರಾ, ಮೆಟಲ್‌ ಡಿಟೆಕ್ಟರ್‌ ಹಾಕಿಲ್ಲ. ಬ್ಯಾಗ್‌ಗಳನ್ನು ಸ್ಕ್ಯಾನ್‌ ಮಾಡುತ್ತಿಲ್ಲ. ಭದ್ರತೆ ಕೂಡ ಸರಿಯಾಗಿಲ್ಲ. ಮೂಲಸೌಕರ್ಯ ಕಲ್ಪಿಸುವವರೆಗೆ ಪ್ರವೇಶ ಶುಲ್ಕ ಹೆಚ್ಚಳ ಮಾಡಬಾರದು’ ಎಂದು ದರ್ಶನ್‌ ಪುಟ್ಟಣ್ಣಯ್ಯ ಎಚ್ಚರಿಕೆ ನೀಡಿದರು.

ಈ ಎಲ್ಲ ಬೆಳವಣಿಗೆಗಳಿಂದ ಎಚ್ಚೆತ್ತುಕೊಂಡ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಏರಿಕೆ ಮಾಡಿದ್ದ ದರವನ್ನು ಇಳಿಸಿದ್ದಾರೆ. ಜೊತೆಗೆ ಕೆಆರ್‌ಎಸ್‌ ಅಣೆಕಟ್ಟೆ ಕೆಳಗಿನ ಸೇತುವೆ ಬಳಿ ವಾಹನಗಳಿಂದ ಅಕ್ರಮವಾಗಿ ಟೋಲ್‌ ಸಂಗ್ರಹಿಲಾಗುತ್ತಿದೆ ಎಂದು ಆರೋಪ ಕೇಳಿಬಂದಿತ್ತು. ಇದೀಗ ಟೋಲ್‌ ಸಂಗ್ರಹಿಸುವ ಕಾರ್ಯವನ್ನು ರದ್ದು ಮಾಡಲಾಗಿದೆ.

‘ಟೋಲ್‌ ಸಂಗ್ರಹ ಕಾರ್ಯವನ್ನು ತಾತ್ಕಾಲಿವಾಗಿ ಸ್ಥಗಿತಗೊಳಿಸಲಾಗಿದೆ. ಪ್ರವೇಶದರ, ವಾಹನ ಪಾರ್ಕಿಂಗ್‌ ದರವನ್ನು ಈ ಹಿಂದೆ ಇದ್ದಂತೆ ಪಡೆಯಲಾಗುವುದು. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಫಾರೂಕ್‌ ಅಹಮದ್‌ ಅಬು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.