ಮಂಡ್ಯ: ತಾಲ್ಲೂಕಿನ ಬಿ.ಗೌಡಗೆರೆ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಚಿರತೆ ದಾಳಿಗೆ ಕರು ಬಲಿಯಾಗಿದೆ.
ರೈತ ಗುರುದರ್ಶನ್ ಎಂಬುವರಿಗೆ ಸೇರಿದ ಮಿಶ್ರತಳಿ ಹಸುವಿನ ಕರುವನ್ನು ಮನೆ ಮುಂದೆ ಕಟ್ಟಿ ಹಾಕಲಾಗಿತ್ತು. ಸಮೀಪದ ಕಬ್ಬಿನ ಗದ್ದೆಗೆ ಎಳೆದೊಯ್ದಿರುವ ಚಿರತೆಯು, ಕರುವನ್ನು ಕೊಂದು ಮಾಂಸ ತಿಂದು ಕಳೆಬರವನ್ನು ಅಲ್ಲೇ ಬಿಟ್ಟು ಹೋಗಿದೆ.
ಮಧ್ಯರಾತ್ರಿ ಸಮಯದಲ್ಲಿ ಮನೆಯ ಹೊರಗೆ ಕರುವಿನ ಕಿರುಚಾಟದ ಶಬ್ದವನ್ನು ಕೇಳಿದ ಮಾಲೀಕರು ಭಯ ಮತ್ತು ಗಾಬರಿಯಿಂದ ಹೊರಗೆ ಬಂದಿಲ್ಲ.
ಕೆಲವು ದಿನಗಳ ಹಿಂದೆ ರೈತ ಗುರುದರ್ಶನ್ ಅವರಿಗೆ ಸೇರಿದ ಒಂದು ನಾಯಿ ಸೇರಿದಂತೆ ಒಟ್ಟು ಎರಡು ನಾಯಿಗಳು ಚಿರತೆ ದಾಳಿಗೆ ಬಲಿಯಾಗಿದ್ದವು. ಚಿರತೆ ಹಾವಳಿಯನ್ನು ನಿಯಂತ್ರಿಸಬೇಕು ಮತ್ತು ಸೂಕ್ತ ಪರಿಹಾರ ಕೊಡಬೇಕು ಎಂದು ಗುರುದರ್ಶನ್ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.