ADVERTISEMENT

ಬಸ್‌ ಟಿಕೆಟ್‌ನಲ್ಲಿ ಲೋಕ ಅದಾಲತ್‌ ಜಾಗೃತಿ

ಕಕ್ಷಿದಾರರ ಅನುಕೂಲಕ್ಕಾಗಿ ಮಂಡ್ಯ ಕೆಎಸ್‌ರ್‌ಟಿಸಿ ಘಟಕದಿಂದ ಮಾಹಿತಿ ಮುದ್ರಣ

​ಪ್ರಜಾವಾಣಿ ವಾರ್ತೆ
Published 23 ಮೇ 2022, 3:05 IST
Last Updated 23 ಮೇ 2022, 3:05 IST
ಬಸ್‌ ಟಿಕೆಟ್‌ನಲ್ಲಿ ‘ತ್ವರಿತ ನ್ಯಾಯಕ್ಕಾಗಿ ಜೂನ್ 25 ರಂದು ಮೆಗಾ ಲೋಕ್‌ ಅದಾಲತ್‌ನಲ್ಲಿ ವ್ಯಾಜ್ಯ ಇತ್ಯರ್ಥ ಪಡಿಸಿಕೊಳ್ಳಿ’ ಎಂದು ಮುದ್ರಿಸಿರುವುದು
ಬಸ್‌ ಟಿಕೆಟ್‌ನಲ್ಲಿ ‘ತ್ವರಿತ ನ್ಯಾಯಕ್ಕಾಗಿ ಜೂನ್ 25 ರಂದು ಮೆಗಾ ಲೋಕ್‌ ಅದಾಲತ್‌ನಲ್ಲಿ ವ್ಯಾಜ್ಯ ಇತ್ಯರ್ಥ ಪಡಿಸಿಕೊಳ್ಳಿ’ ಎಂದು ಮುದ್ರಿಸಿರುವುದು   

ಮಂಡ್ಯ: ಸಾರ್ವಜನಿಕರ ಸೇವೆಗೆ ಹೆಸರಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಲೋಕ ಅದಾಲತ್‌ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ.

ಮಂಡ್ಯ ಘಟಕದ ಬಸ್‌ಗಳಲ್ಲಿ ಪ್ರಯಾಣಿಸುವವರಿಗೆ ನೀಡುವ ಟಿಕೆಟ್‌ನಲ್ಲಿ ‘ತ್ವರಿತ ನ್ಯಾಯಕ್ಕಾಗಿ ಜೂನ್‌ 25ರಂದು ಮೆಗಾ ಲೋಕ್‌ ಅದಾಲತ್‌ನಲ್ಲಿ ವ್ಯಾಜ್ಯ ಇತ್ಯರ್ಥ ಪಡಿಸಿ ಕೊಳ್ಳಿ’ ಎಂದು ಮುದ್ರಿಸಲಾಗಿದೆ. ಈ ಜಾಗೃತಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಸಾರ್ವಜನಿಕರಿಗೆ ಮೆಗಾ ಲೋಕ ಅದಾಲತ್‌ ಬಗ್ಗೆ ತಿಳಿಸುವುದು ಇದರ ಉದ್ದೇಶ. ಬಸ್‌ಗಳಲ್ಲಿ ಪ್ರಯಾಣಿಸುವ ಮಧ್ಯಮ ವರ್ಗದವರಿಗೆ, ಗ್ರಾಮೀಣ ಭಾಗದ ಕಕ್ಷಿದಾರರು ಅನುಕೂಲವಾಗಬೇಕು, ಅವರಿಗೆ ಮಾಹಿತಿ ನೀಡಬೇಕು ಎಂಬುದನ್ನು ಸಂಚರಿಸುವುದು ಬಸ್‌ನಲ್ಲಿ ಎಂಬುದನ್ನು ಗಮನದಲ್ಲಿಟ್ಟುಕೊಂಡು ಬಸ್‌ ಟಿಕೆಟ್‌ನಲ್ಲಿ ಮಾಹಿತಿ ನೀಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸದೆ ಇರುವಂಥವರಿಗೆ, ಸಾರ್ವಜನಿಕ ಸಾರಿಗೆಗಳಲ್ಲಿ ಓಡಾಡುವವರ ಮೂಲಕ ಈ ಮಾಹಿತಿ ಬೇಗ ರವಾನೆಯಾಗುತ್ತದೆ. ವ್ಯಾಜ್ಯಗಳನ್ನು ಶೀಘ್ರವಾಗಿ ಇತ್ಯರ್ಥ ಪಡಿಸಲು ಇದು ಕೈಗೆಟಕುವ ಪ್ರಚಾರ ಮಾಧ್ಯಮವಾಗಿದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲ ಎಂ.ಗುರುಪ್ರಸಾದ್‌ ಹೇಳುತ್ತಾರೆ.

ADVERTISEMENT

ಹಿಂದೆ ಗ್ರಾಮೀಣ ಬೀದಿಗಳಲ್ಲಿ, ಅರಳಿಕಟ್ಟೆಗಳ ಮೇಲೆ, ಪಂಚಾಯಿತಿ ಕಚೇರಿಗಳಲ್ಲಿ ಶಾಮಿಯಾನ ಹಾಕಿಸಿ ತಮಟೆ ಬಾರಿಸಿ ಜನರಿಗೆ ಲೋಕ ಅದಾಲತ್‌ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು. ರಾಜೀ ಪ್ರಕರಣಗಳ ಬಗ್ಗೆ ನ್ಯಾಯಾಧೀಶರು ಮತ್ತು ಕೆಲವು ವಕೀಲರು ಸೇರಿ ಕ‌ಕ್ಷಿದಾರರಿಗೂ ಜಾಗೃತಿ ಮೂಡಿಸುತ್ತಿದ್ದರು. ಈ ಪ್ರಚಾರ ತಂತ್ರ ಶ್ಲಾಘನೀಯ ಎಂದು ವಕೀಲರದಾದ ಸುರೇಂದ್ರಕುಮಾರ್, ಅನ್ನಪೂರ್ಣಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

‘ನಮ್ಮೂರಿಗೆ ಪ್ರಯಾಣಿಸಲು ಟಿಕೆಟ್‌ ತೆಗೆದುಕೊಂಡಿದ್ದೇವೆ. ನ್ಯಾಯಾಲಯದ ವ್ಯಾಜ್ಯ ಇರುವವರಿಗೆ ಹಾಗೂ ಕಾನೂನಿಡಿ ಇತ್ಯರ್ಥ ಪಡಿಸಿಕೊಳ್ಳುವ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಲು ಸಾರಿಗೆ ಸಂಸ್ಥೆಯವರು ವಿಭಿನ್ನ ಹಾಗೂ ವಿನೂತನ ಕೆಲಸ ಮಾಡಿದ್ದು, ನೆರವಾಗುತ್ತಿದೆ. ಟಿಕೆಟ್‌ ಕೊಂಡವರು ಇದರಲ್ಲಿನ ಮಾಹಿತಿ ಓದಿ ಸುಮ್ಮನಾಗದೆ ಈ ಮಾಹಿತಿಯನ್ನು ಇತರರಿಗೂ ತಿಳಿಸಿದರೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ನಂಜುಂಡಸ್ವಾಮಿ, ಸತೀಶ್‌ ಮದ್ದೂರು, ರೇಖಾ, ಸುಷ್ಮಿತಾ ಅಭಿಪ್ರಾಯಪಟ್ಟರು.

ನಮ್ಮ ಸಂಸ್ಥೆಯವರು ಟಿಕೆಟ್‌ನಲ್ಲಿ ಜಾಗೃತಿ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ. ಗ್ರಾಮೀಣ ಭಾಗದ ಜನರಿಗೆ ಸಾರಿಗೆ ಅನುಕೂಲಕರವಾಗಿರುವಂತೆ ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿ ಮೆಗಾ ಲೋಕ ಅದಾಲತ್‌ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಮಾಹಿತಿಯನ್ನು ಎಲ್ಲರೂ ಹಂಚಿ ಕೊಳ್ಳಬೇಕು ಎಂದು ಕೆಎಸ್‌ಆರ್‌ಟಿಸಿ ಮಂಡ್ಯ ನಗರ ನಿಲ್ದಾಣಾಧಿಕಾರಿ ಎಸ್‌.ಸಿ.ಶಾಂತರಾಜು ಮೆಚ್ಚುಗೆ ಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.