ಮಂಡ್ಯ: ಯುವತಿ ಪ್ರೀತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದ್ದು, ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಪೋಷಕರು ಯುವಕನ ಸಾವಿನ ಬಗ್ಗೆ ಬೇರೆಯದೇ ರೀತಿಯಲ್ಲಿ ದೂರು ನೀಡಿದ್ದಾರೆ.
ಪಾಂಡವಪುರ ತಾಲ್ಲೂಕಿನ ಹಾರೋಹಳ್ಳಿಯ ಭಾಸ್ಕರ್ (22) ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆಕೆ ಪ್ರೀತಿ ಕೋರಿಕೆಯನ್ನು ನಿರಾಕರಿಸಿದ್ದರಿಂದ ಆತ್ಮಹತ್ಯೆ ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಮ್ಮ ಪುತ್ರ ಭಾಸ್ಕರ್ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದನು. ಈತನಿಗೆ ಕಳೆದ ಹಲವು ವರ್ಷಗಳಿಂದ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದು, ಇದರಿಂದ ಬೇಸತ್ತು ಹಾಗೂ ಹೊಟ್ಟೆನೋವು ತಾಳಲಾರದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಂದೆ ಅಂದಾನಿ ಗೌಡ ದೂರು ನೀಡಿದ್ದಾರೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಶವ ಪತ್ತೆ
ಮಳವಳ್ಳಿ: ಪಟ್ಟಣದ ದೊಡ್ಡಕೇರಿಯ ಪಾರ್ಕ್ ಪಕ್ಕದ ಕಂಬದ ಬಳಿ ಶನಿವಾರ ಅಪರಿಚಿತ ವ್ಯಕ್ತಿಯ ಶವ
ಪತ್ತೆಯಾಗಿದೆ.
ನೀರಾವರಿ ಇಲಾಖೆಯ ಪಾರ್ಕ್ ಮುಂಭಾಗದ ವಾಹನ ನಿಲುಗಡೆ ಸ್ಥಳದ ಕಲ್ಲಿನಕಂಬದ ಬಳಿ ಮಲಗಿದ ಸ್ಥಿತಿಯಲ್ಲಿ ಸುಮಾರು 65 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಬೆಳಿಗ್ಗೆ ವಾಯುವಿಹಾರಕ್ಕೆ ಬರುತ್ತಿದ್ದವರು ಗಮನಿಸಿ ಪಟ್ಟಣದ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಶವದ ಮೈಮೇಲೆ ಬಿಳಿ ಬಣ್ಣದ ತೋಳಿನ ಶರ್ಟ್, ಕಡು ನೀಲಿ ಬಣ್ಣದ ನಿಕ್ಕರ್ ಇದೆ.
ಸೊಂಟದಲ್ಲಿ ಹಳೆಯ ಗಾಯದ ಗುರುತಿದ್ದು, ಶವವನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಮಾಹಿತಿಗೆ ಮಳವಳ್ಳಿ ಪಟ್ಟಣದ ಪೊಲೀಸರನ್ನು ಸಂಪರ್ಕಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.