ADVERTISEMENT

ಮದ್ದೂರು ಎಪಿಎಂಸಿ 10 ನಿರ್ದೇಶಕರ ನೇಮಕಾತಿ ರದ್ದು: ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 4:10 IST
Last Updated 11 ಸೆಪ್ಟೆಂಬರ್ 2020, 4:10 IST
ಮದ್ದೂರು ಎಪಿಎಂಸಿ ಎಳನೀರು ಮಾರುಕಟ್ಟೆ
ಮದ್ದೂರು ಎಪಿಎಂಸಿ ಎಳನೀರು ಮಾರುಕಟ್ಟೆ   

ಮದ್ದೂರು:ಎಪಿಎಂಸಿ ಎಳನೀರು ಮಾರುಕಟ್ಟೆ ಆಡಳಿತ ಮಂಡಳಿಗೆ ಸರ್ಕಾರದಿಂದ ನಾಮ ನಿರ್ದೇಶನಗೊಂಡಿದ್ದ ನಿರ್ದೇಶಕರ ಪಟ್ಟಿಯಲ್ಲಿ 10 ಮಂದಿಯ ನೇಮಕಾತಿಯನ್ನು ಕೈಬಿಟ್ಟು ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ತಾಲ್ಲೂಕು ಬಿಜೆಪಿ ಘಟಕದ ಎರಡು ಗುಂಪುಗಳ ನಡುವೆ ಭಿನ್ನಮತ ಸ್ಫೋಟಗೊಂಡಿದೆ.

15 ಮಂದಿ ಬಿಜೆಪಿ ಕಾರ್ಯಕರ್ತರನ್ನು ನಾಲ್ಕು ತಿಂಗಳ ಹಿಂದಷ್ಟೇ ಅವಿರೋಧವಾಗಿ ನಿರ್ದೇಶಕರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು. ಅವರಲ್ಲಿ ಜಿ.ಸಿ.ಮಹೇಂದ್ರ ಅಧ್ಯಕ್ಷ, ಹೊನ್ನಲಗೆರೆ ಸ್ವಾಮಿಯನ್ನು ಉಪಾಧ್ಯಕ್ಷರನ್ನಾಗಿಯೂ ಆಯ್ಕೆಮಾಡಲಾಗಿತ್ತು. ನಾಮ ನಿರ್ದೇಶನಗೊಂಡಿದ್ದ ಮೂಲ ಬಿಜೆಪಿಗರು ಎನ್ನಲಾಗುತ್ತಿರುವ 10 ಮಂದಿಯನ್ನು ಕೈಬಿಟ್ಟು ಆಸ್ಥಾನಗಳಿಗೆ ಹೊಸದಾಗಿ 10 ಮಂದಿಯನ್ನು ಆಯ್ಕೆ ಮಾಡಿರುವ ಕಾರಣ ಮೂಲ ಬಿಜೆಪಿಗರ ಕಣ್ಣು ಕೆಂಪಗಾಗುವಂತೆ ಮಾಡಿದೆ.

ಈ ನಡುವೆ ರದ್ದುಗೊಂಡ ಪಟ್ಟಿಯು ಎಪಿಎಂಸಿ ಕಚೇರಿಗೆ ತಲುಪುತಿದ್ದಂತೆಯೇ ಕೆಂಡಾಮಂಡಲರಾದ ರದ್ದುಗೊಂಡ 10 ಮಂದಿ ನಿರ್ದೇಶಕರು, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡರಿಗೆ ದೂರು ನೀಡಲು ಮುಂದಾಗಿದ್ದಾರೆ. ಇದರಿಂದ ಈಗಾಗಲೇ ಮೂಲ ಬಿಜೆಪಿಗರು ಹಾಗೂ ವಷರ್ದ ಹಿಂದೆ ವಲಸೆ ಬಂದ ಮುಖಂಡರ ನಡುವೆ ಸಮರ ಏರ್ಪಟ್ಟಿದೆ.

ADVERTISEMENT

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯೆಂದೇ ಬಿಂಬಿತವಾಗಿರುವ ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಸೇರಿ ಎರಡು ಬಣಗಳ ನಡುವೆ ಕಿತ್ತಾಟ ಕಂಡುಬಂದಿದೆ. ಮುಂಬರುವ ಗ್ರಾ.ಪಂ. ಚುನಾವಣೆ ಸೇರಿ ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೂ ಇದು ಪರಿಣಾಮ ಬೀರಲಿದೆ ಎಂದೇ ಹೇಳಲಾಗುತ್ತಿದೆ.

‘ಈಗ ಬಿಡುಗಡೆಗೊಳಿಸಲಾಗಿರುವ ಪಟ್ಟಿಯನ್ನು ನಾಲ್ಕು ತಿಂಗಳ ಹಿಂದೆಯೇ ಕಳುಹಿಸಲಾಗಿತ್ತು. ಆ ಪಟ್ಟಿಯನ್ನೇ ಪರಿಗಣಿಸಿ ಮರು ಬಿಡುಗಡೆ ಮಾಡಲಾಗಿದೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ’ ಎಂದು ಎಸ್‌.ಸಿ.ಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.