ಮದ್ದೂರು: ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಯನ್ನು ಸುಸ್ಸಜ್ಜಿತವಾಗಿ ನಿರ್ಮಿಸಲು ಶಾಸಕ ಕೆ.ಎಂ. ಉದಯ್ ಅವರು ಸ್ವಂತ ನಿವೇಶನವನ್ನು ದಾನ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಪಟ್ಟಣದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಿವೇಶನವನ್ನು ಪಕ್ಷಕ್ಕೆ ನೋಂದಣಿ ಮಾಡಿಸಿದ ಪ್ರಕ್ರಿಯೆ ಮುಗಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಶಾಸಕ ಕೆ.ಎಂ. ಉದಯ್ ಅವರ ಈ ಕಾರ್ಯ ಇತರರಿಗೂ ಮಾದರಿಯಾಗಿದೆ. ಇದಕ್ಕಾಗಿ ಅವರನ್ನು ಅಭಿನಂದಿಸುವೆ. ರಾಜ್ಯದಾದ್ಯಂತ ತಾಲ್ಲೂಕುಗಳಲ್ಲಿಯೂ ಪಕ್ಷದ ಕಚೇರಿಗಳ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದರು.
ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶೀಘ್ರದಲ್ಲೇ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಮೊದಲ ಹಂತದಲ್ಲಿ ಈಗಾಗಲೇ ನೋಂದಣಿಯಾಗಿರುವ ರಾಜ್ಯದ ವಿವಿಧ 100 ತಾಲ್ಲೂಕುಗಳಲ್ಲಿ ಪಕ್ಷದ ನೂತನ ಕಚೇರಿಗಳ ಶಂಕುಸ್ಥಾಪನೆಗೆ ವರ್ಚುವಲ್ ಮೂಲಕ ಅವರು ಚಾಲನೆ ನೀಡಲಿದ್ದಾರೆ ಎಂದರು.
ಶಾಸಕ ಕೆ.ಎಂ. ಉದಯ್ ಮಾತನಾಡಿ, ಪಟ್ಟಣದ ಐ.ಬಿ ವೃತ್ತದ ಬಳಿ ಮೈಸೂರು ಬೆಂಗಳೂರು ಹೆದ್ದಾರಿಗೆ ಹೊಂದಿಕೊಂಡಂತೆ 5,445 ಅಡಿ ವಿಸ್ತೀರ್ಣದ (5 ಗುಂಟೆ ) ಜಾಗ ಖರೀದಿಸಿದ್ದೆ. ಅದನ್ನು ಪಕ್ಷದ ಕಚೇರಿ ನಿರ್ಮಿಸಲು ದಾನ ನೀಡಿದ್ದೇನೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆಲುವರಾಜು, ಪುರಸಭಾಧ್ಯಕ್ಷೆ ಕೋಕಿಲ ಅರುಣ್, ಕೆಪಿಸಿಸಿ ಖಜಾoಚಿ ವಿನಯ್ ಕಾರ್ತಿಕ್, ತಹಶೀಲ್ದಾರ್ ಸ್ಮಿತಾ ಇನ್ನಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.