ಶ್ರೀರಂಗಪಟ್ಟಣ: ‘ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಎಂಬುದು ನಮ್ಮ ಸಮಾಜದ ಪ್ರಬಲ ಬೇಡಿಕೆ. ಆದರೆ, ಈ ಬೇಡಿಕೆ ಈಡೇರಿಕೆಗೆ ಸರ್ಕಾ ರವನ್ನು ಬ್ಲಾಕ್ ಮೇಲ್ ಮಾಡುವುದಿಲ್ಲ’ ಎಂದು ಚಿತ್ರದುರ್ಗದ ಬಸವ ಮಾಚಿದೇವ ಸ್ವಾಮೀಜಿ ಹೇಳಿದರು.
ಇಲ್ಲಿಗೆ ಸಮೀಪದ ಚಂದ್ರವನ ಆಶ್ರಮದಲ್ಲಿ ಶನಿವಾರ ನಡೆದ ಮಡಿ ವಾಳ ಸಮುದಾಯದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಡಾ.ಅನ್ನಪೂರ್ಣಮ್ಮ ಅವರ ವರದಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. 40 ವರ್ಷಗಳಿಂದ ಈ ಬೇಡಿಕೆ ಇಡುತ್ತಿದ್ದೇವೆ. ಈ ಸಂಬಂಧ ದೇವರಹಿಪ್ಪರಗಿಯಿಂದ ಬೆಂಗಳೂರು ವರೆಗೆ ನಾಲ್ಕು ವರ್ಷಗಳ ಹಿಂದೆಯೇ ಪಾದಯಾತ್ರೆ ಮಾಡಿದ್ದೇವೆ. ಆದರೂ ಸರ್ಕಾರ ಈ ಬಗ್ಗೆ ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ದೂರಿದರು.
ಹಲವು ರಾಜ್ಯಗಳಲ್ಲಿ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಈ ಕುರಿತು ಹಲವು ಬಾರಿ ಮುಖ್ಯಮಂತ್ರಿ ಅವರಲ್ಲಿ ನಿವೇದನೆ ಮಾಡಿಕೊಂಡಿದ್ದು, ನಮ್ಮ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಸರ್ಕಾರ ಮಡಿವಾಳರ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದರೂ ಈ ನಿಗಮಕ್ಕೆ ಇದುವರೆಗೆ ಅಧ್ಯಕ್ಷರನ್ನೇ ನೇಮಿಸಿಲ್ಲ. ಕೇಳಿದರೆ ಮುಖ್ಯಮಂತ್ರಿ ಸಬೂಬು ಹೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 8 ಲಕ್ಷ ಮಡಿವಾಳರು ಇದ್ದಾರೆ ಎಂದು ಸರ್ಕಾರದ ವರದಿ ಹೇಳುತ್ತಿದೆ. ಆದರೆ, ಮಡಿವಾಳರು ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿದ್ದು, ಪಡಿತರ ಚೀಟಿ, ಸಾಲ ಸೌಲಭ್ಯ ಕೂಡ ಸಿಗುತ್ತಿಲ್ಲ. ನಿಕೃಷ್ಟ ಜೀವನ ನಡೆಸುತ್ತಿದ್ದೇವೆ. ನಮ್ಮ ಹಕ್ಕು ನಮಗೆ ದಕ್ಕಬೇಕು. ಅದಕ್ಕಾಗಿ ಅಗತ್ಯ ಬಿದ್ದರೆ ಹೋರಾಟ ರೂಪಿಸುತ್ತೇವೆ’ ಎಂದು ಎಚ್ಚರಿಸಿದರು.
ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಳಾಗಾಲ ಮಂಜುನಾಥ್, ಗೌರವಾಧ್ಯಕ್ಷ ನರಸಿಂಹ, ಉಪಾಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಸತೀಶ್ ಪ್ರೇಮ್, ಕೃಷ್ಣಶೆಟ್ಟಿ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.