ಮಳವಳ್ಳಿ: ತಾಲ್ಲೂಕಿನ ಕಿರುಗಾವಲು ಗ್ರಾಮದ ಯುವ ರೈತ ಉಲ್ಲಾಸ್ ಗೌಡ ಅವರು ಬಹು ಬೇಡಿಕೆಯ ಬಂಡೂರು ತಳಿಯ ಏಳು ತಿಂಗಳ 2 ಟಗರು ಮರಿಗಳನ್ನು ಬರೋಬ್ಬರಿ ₹1.60 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ.
ಕಿರುಗಾವಲಿನ ಕುಮಾರ್ ಮತ್ತು ವಡ್ಡರಹಳ್ಳಿಯ ಕುಳ್ಳೇಗೌಡ ಎಂಬುವವರು ಖರೀದಿಸಿದ್ದಾರೆ.
ಬಿಸಿಎ ವ್ಯಾಸಂಗ ಮಾಡುತ್ತಿರುವ ಉಲ್ಲಾಸ್ ಗೌಡ ಅವರ ಕುಟುಂಬ ಬಂಡೂರು ಕುರಿ ಸಾಕಾಣಿಕೆಯಲ್ಲಿ ತೊಡಗಿದೆ. ನಾಲ್ಕೈದು ತಿಂಗಳ ಹಿಂದೆ ಶಿವಮೊಗ್ಗ ಮೂಲದ ರೈತರಿಗೆ ಕುರಿಯೊಂದನ್ನು ₹1.48 ಲಕ್ಷಕ್ಕೆ ಮಾರಾಟ ಮಾಡಿದ್ದರು.
‘ನಮ್ಮ ತಾತ ಹಾಗೂ ತಂದೆ ಮನೋಹರ್ ಅವರು ಕುರಿ ಸಾಕಾಣಿಕೆ ಮಾಡುತ್ತಿದ್ದರು, ನಾನು ಅವರೊಂದಿಗೆ ಕೈಜೋಡಿಸಿದ್ದೇನೆ. ವಿಶೇಷ ಕಾಳಜಿಯಿಂದ ಸಾಕುತ್ತೇವೆ’ ಎಂದು ಉಲ್ಲಾಸ್ ಗೌಡ ಹೇಳಿದರು.
‘ಬಂಡೂರು ಕುರಿಯ ಮಾಂಸ ಸಾಮಾನ್ಯ ಕುರಿ ಹಾಗೂ ಮೇಕೆಗಳಿಗಿಂತ ಹೆಚ್ಚು ರುಚಿ ಇರುತ್ತದೆ. ಮಾಂಸ ಮಾರಾಟ ತೀರ ಅಪರೂವಾಗಿದೆ. ಈ ತಳಿಯ ಕುರಿಗಳು ಕಡಿಮೆ ಇವೆ’ ಎಂದರು.
ಹೆಚ್ಚು ಬೆಲೆಗೆ ಮಾರಾಟವಾದ ಕುರಿಗಳಿಗೆ ವಿಶೇಷ ಪೂಜೆ ಮಾಡಿ, ಮೆರವಣಿಗೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.