ಮಂಡ್ಯ: ಭಾರತ ಸಂವಿಧಾನ ವಿರೋಧಿಯಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ‘ಮನುಸ್ಮೃತಿ’ ಪ್ರೇರಿತ ನೀತಿಯನ್ನು ಖಂಡಿಸಿ, ವಿದ್ಯೆ, ಆರೋಗ್ಯ, ಅಧಿಕಾರ, ಸಂಪತ್ತು, ಭೂಮಿಯನ್ನು ಸರ್ವರಿಗೂ ಸಮಾನವಾಗಿ ಹಂಚಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ‘ಭಾರತ ಸಂವಿಧಾನ ಸಂಭ್ರಮ–75’ ಅಂಗವಾಗಿ ಗುರುವಾರ ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ನಡೆಸಿ ನಂತರ ಬಹಿರಂಗ ಸಭೆ ನಡೆಸಲಾಯಿತು.
ಸಮಿತಿಯ ಮೈಸೂರು ವಿಭಾಗೀಯ ಸಂಚಾಲಕ ಅನಿಲ್ಕುಮಾರ್ ಮಾತನಾಡಿ, ‘ಸರ್ಕಾರಗಳು ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿವೆ. ಸಂವಿಧಾನವು ಯುವಕರಿಗೆ ಉದ್ಯೋಗ ನೀಡಬೇಕೆಂದು ಹೇಳುತ್ತದೆ. ಆದರೆ ಒಂದೇ ಒಂದು ಕಾನೂನನ್ನು ಸಂವಿಧಾನದ ಆಶಯದಂತೆ ಜಾರಿಗೆ ತಂದಿಲ್ಲ’ ಎಂದು ಆರೋಪಿಸಿದರು.
ನೆಹರೂ ಅವರ ಹುಟ್ಟುಹಬ್ಬದಂದು ಮಕ್ಕಳ ದಿನಾಚರಣೆ ಎಂಬುದಾಗಿ ಆಚರಿಸುತ್ತಾರೆ. ಆದರೆ, ನಮಗೆ ಯಾರಿಗೂ ಮಕ್ಕಳು ಕಂಡರೆ ಇಷ್ಟವಿಲ್ಲವೇ, ಬೇರೆ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಏಕೆ ಆಚರಿಸಲಿಲ್ಲ ಎಂದು ಪ್ರಶ್ನಿಸಿದರು.
ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ವೆಂಕಟಗಿರಿಯಯ್ಯ ಮಾತನಾಡಿ, ‘ಆಡಳಿತದಲ್ಲಿರುವ ಬಿಜೆಪಿ ಸಂಘ ಪರಿವಾರ ಸಂವಿಧಾನ ಬದಲಿಸುವ ಮಾತನಾಡಿ, ದೇಶ ದ್ರೋಹಿ ನೀತಿ ಅನುಸರಿಸುತ್ತಿದೆ. ವಿರೋಧ ಪಕ್ಷವಾದ ಕಾಂಗ್ರೆಸ್ ಪಕ್ಷ ತನ್ನ ಅಧಿಕಾರಾವಧಿಯಲ್ಲಿ ಭಾರತ ಸಂವಿಧಾನವನ್ನೇ ಮೂಲೆಯಲ್ಲಿಟ್ಟು 95 ಬಾರಿ ತಿದ್ದುಪಡಿ ಮಾಡಿ ಸಂವಿಧಾನ ವಿರೋಧಿಯಾಗಿ ನಡೆದುಕೊಂಡು, ಈಗ ಸಂವಿಧಾನ ರಕ್ಷಣೆಯ ನಾಟಕ ಆಡುತ್ತಿರುವ ಕಾಂಗ್ರೆಸ್ ಬಣ್ಣ ಬಯಲಾಗಿದೆ’ ಎಂದು ಆಕ್ರೋಶ ವ್ಯಕ್ರಪಡಿಸಿದರು.
ಬಹಿರಂಗ ಸಭೆಗೂ ಮುನ್ನ ನಗರದ ಜೆ.ಸಿ. ವೃತ್ತದ ಬಳಿ ಜಮಾಯಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)ಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.
ಕಾರ್ಯಕ್ರಮದಲ್ಲಿ ವಿಚಾರವಾದಿ ಕೃಷ್ಣಮೂರ್ತಿ, ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆನಂದ್, ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಸುಶ್ಮಿತಾ ಆನಂದ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.