ADVERTISEMENT

ಮದ್ಯ ಮಾರಾಟ ತಡೆಗೆ ಪೊರಕೆ ಹಿಡಿದು ನಿಲ್ಲಿ: ಶಾಸಕ ಪಿ.ರವಿಕುಮಾರ್‌

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 4:54 IST
Last Updated 6 ಅಕ್ಟೋಬರ್ 2025, 4:54 IST
ಮಂಡ್ಯ ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ನಡೆದ ಗಾಂಧಿ ಜಯಂತಿ ಸಂಭ್ರಮಾಚರಣೆಯನ್ನು ಶಾಸಕ ಪಿ.ರವಿಕುಮಾರ್ ಉದ್ಘಾಟಿಸಿದರು
ಮಂಡ್ಯ ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ನಡೆದ ಗಾಂಧಿ ಜಯಂತಿ ಸಂಭ್ರಮಾಚರಣೆಯನ್ನು ಶಾಸಕ ಪಿ.ರವಿಕುಮಾರ್ ಉದ್ಘಾಟಿಸಿದರು   

ಮಂಡ್ಯ: ‘ಜಿಲ್ಲೆಯ ಗ್ರಾಮೀಣ ಭಾಗದ ಕೆಲವು ಹಳ್ಳಿಗಳಲ್ಲಿ ಎಗ್ಗಿಲ್ಲದೆ ಮದ್ಯ, ಗಾಂಜಾ, ಡ್ರಗ್ಸ್‌ ಮಾರಾಟ ಮಾಡಲಾಗುತ್ತಿದೆ. ಹೆಣ್ಣು ಮಕ್ಕಳು ಪೊರಕೆ ಹಿಡಿದು ನಿಂತರೆ ಮಾತ್ರ ಮಾರಾಟ ತಡೆಗಟ್ಟಲು ಸಾಧ್ಯ, ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ತಡೆಗಟ್ಟಲು ಸಾಧ್ಯವಿಲ್ಲ’ ಎಂದು ಶಾಸಕ ಪಿ.ರವಿಕುಮಾರ್‌ ಎಚ್ಚರಿಕೆ ನೀಡಿದರು.

ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಗಾಂಧಿ ಜಯಂತಿ ಸಂಭ್ರಮಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ನಡೆದ ಗಾಂಧಿಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

‘ಕೂಲಿ ಹಣವು ಮದ್ಯ ಕುಡಿಯಲು ಬಳಕೆ ಆಗುತ್ತಿದೆ. ಇದರಿಂದ ಮಕ್ಕಳಿಗೆ ತೊಂದರೆ ಆಗುತ್ತದೆ. ಇತ್ತೀಚೆಗೆ ಮಕ್ಕಳು ಡ್ರಗ್ಸ್, ಗಾಂಜಾಗೆ ದಾಸರಾಗುತ್ತಿದ್ದಾರೆ. ಮಕ್ಕಳ ಮೇಲೆ ಪೋಷಕರು ನಿಗಾವಹಿಸಬೇಕು. ಮಕ್ಕಳನ್ನು ಚೆನ್ನಾಗಿ ಓದಿಸಿದರೆ ಮನೆಗೆ ದಾರಿ ದೀಪವಾಗುತ್ತಾರೆ. ಆದ್ದರಿಂದ ಡ್ರಗ್ಸ್, ಗಾಂಜಾ ಸೇವನೆ ವಿಷಯದಲ್ಲಿ ಮಕ್ಕಳ ಮೇಲೆ ಪೋಷಕರು ನಿಗಾ ವಹಿಸುವುದು ಸೂಕ್ತ’ ಎಂದು ಸಲಹೆ ನೀಡಿದರು.

ADVERTISEMENT

ಸಾನ್ನಿಧ್ಯ ವಹಿಸಿ ಮಾತನಾಡಿದ ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ, ‘ಇಂದಿನ ಯುವಜನಾಂಗ ದುಶ್ಚಟಗಳ ದಾಸರಾಗಿ 20ರ ವಯೋಮಾನದವರೂ ವ್ಯಸನಗಳಿಗೆ ಬಲಿಯಾಗಿರುವುದು ನೋವಿನ ಸಂಗತಿ. ಭಾರತ ದೇಶ ಇಂದು ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ವೈಜ್ಞಾನಿಕ ಕ್ಷೇತ್ರದಲ್ಲಿ ವಿಶ್ವದ ಎದುರು ವಿಫುಲವಾಗಿ ಬೆಳೆದುನಿಂತಿದೆ. ಇದನ್ನು ಸಹಿಸದ ವಿದೇಶಿ ಶಕ್ತಿಗಳು ನಶೆಯುಕ್ತ ಸಾಮಗ್ರಿಗಳನ್ನು ವಿಮಾನದ ಮೂಲಕ ದೇಶದ ಯುವ ಜನಾಂಗಕ್ಕೆ ತಲುಪಿಸಿ ರೋಗಗ್ರಸ್ಥರನ್ನಾಗಿ ಮಾಡುವ ಹುನ್ನಾರ ನಡೆಸುತ್ತಿವೆ’ ಎಂದು ವಿಷಾದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮುಖಂಡರಾದ ತಗ್ಗಹಳ್ಳಿ ವೆಂಕಟೇಶ್, ಬೋರೇಗೌಡ, ಹನುಮಂತಯ್ಯ ಕೊಣನೂರು, ಎಂ.ಎಸ್.ಶ್ರೀಕಂಠಸ್ವಾಮಿ, ಬಿ.ಚಂದ್ರು, ಸುಜಾತಕೃಷ್ಣ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಿ.ಜಯಂತ್ ಪೂಜಾರಿ, ಜಿಲ್ಲಾ ಯೋಜನಾಧಿಕಾರಿ ಚೇತನಾ, ತಾಲ್ಲೂಕು ಯೋಜನಾಧಿಕಾರಿ ಸುರೇಶ್ಶೆಟ್ಟಿ ಭಾಗವಹಿಸಿದ್ದರು.

‘ತಿಮರೋಡಿ ಬಿಜೆಪಿಯ ಅಸೋಸಿಯೇಟ್‌’

ಮಂಡ್ಯ: ಧರ್ಮಸ್ಥಳ ಪ್ರಕರಣದಲ್ಲಿ ಕೇಳಿ ಬಂದಿರುವ ಮಹೇಶ್‌ಶೆಟ್ಟಿ ತಿಮರೋಡಿ ಬಿಜೆಪಿಯ ಅಸೋಸಿಯೇಟ್ ಆಗಿದ್ದು ತಿಮರೋಡಿ ಬೆಳೆಯುವುದಕ್ಕೆ ಬಿಜೆಪಿಯವರೇ ಕಾರಣರಾಗಿ ಮತಕ್ಕಾಗಿ ಧರ್ಮ ದೇವಸ್ಥಾನ ದುರುಪಯೋಗ ಮಾಡಿಕೊಂಡಿದ್ದಾರೆ’ ಎಂದು ಶಾಸಕ ಪಿ.ರವಿಕುಮಾರ್‌ ಕಿಡಿಕಾರಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ ‘ಧರ್ಮಸ್ಥಳ ಸಂಘದಿಂದ ಸಾಕಷ್ಟು ಕಾರ್ಯಕ್ರಮ ನಡೆಯುತ್ತಿವೆ. ನಮ್ಮ ಸರ್ಕಾರ ಯಾರ ಪರ ವಿರೋಧ ಇಲ್ಲ. ಧರ್ಮಸ್ಥಳ ಪ್ರಕರಣ ಸಮಗ್ರವಾಗಿ ತನಿಖೆ ಆಗಬೇಕು. ಹಾಗಾಗಿ ಧರ್ಮಸ್ಥಳ ಪ್ರಕರಣವನ್ನು ಎಸ್‌ಐಟಿಗೆ ವಹಿಸಿ ತನಿಖೆ ನಡೆಸಲಾಗುತ್ತಿದೆ. ಶ್ರೀ ಮಂಜುನಾಥಸ್ವಾಮಿಯ ಶಕ್ತಿ ಬಗ್ಗೆ ಎಲ್ಲರಿಗೂ ಗೊತ್ತಾಗಿದೆ. ಚಕ್ರವ್ಯೂಹ ಈಗ ಯಾವ ರೀತಿ ರಿವರ್ಸ್ ತಿರುಗಿಕೊಂಡಿದೆ ಎನ್ನುವುದು ಗೊತ್ತಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.