ಮಂಡ್ಯ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಧಾರಾಕಾರ ಮಳೆ ಸುರಿದಿದೆ. ನಗರದಲ್ಲಿ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಳೆ ಸಂಜೆ 7ರವರೆಗೂ ಸುರಿಯುತ್ತಲೇ ಇತ್ತು.
ಬೆಳಿಗ್ಗೆಯಿಂದಲೂ ಮೋಡಮುಚ್ಚಿದ ವಾತಾವರಣ ಇತ್ತು. ಮಳೆ ಆರಂಭವಾಗುತ್ತಿದ್ದಂತೆ ಕತ್ತಲು ಕವಿದಂತಾಯಿತು. ಶಾಲೆ ಬಿಡುವ ವೇಳೆಗೆ ಮಳೆ ಆರಂಭವಾದ ಕಾರಣ ಮಕ್ಕಳು ಮನೆ ಸೇರಲು ಪರದಾಡುವಂತಾಯಿತು.
ಮನೆ ಕುಸಿತ: ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂ ಗ್ರಾಮದಲ್ಲಿ ಒಂದು ಹೆಂಚಿನಮನೆ ಭಾಗಶಃ ಕುಸಿದಿದೆ. ದೊಡ್ಡೇಗೌಡನಕೊಪ್ಪಲು ಕಿರುಸೇತುವೆ ಕುಸಿದಿದ್ದು ಕಾವೇರಿ ನದಿ ದಡದಲ್ಲಿರುವ ಸಾಯಿಧಾಮದ ಸಂಪರ್ಕ ಕಡಿತಗೊಂಡಿದೆ.
ಕೆ.ಶೆಟ್ಟಿಹಳ್ಳಿ ಬಳಿ ಬೆಂಗಳೂರು–ಮೈಸೂರು ರಾಷ್ಟೀಯ ಹೆದ್ದಾರಿಗೆ ಬೃಹತ್ ಬಾಗೆ ಮರ ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ತಕ್ಷಣ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಮಂಡ್ಯ ತಾಲ್ಲೂಕು ಕಿರಗಂದೂರು ಕೆರೆ ಹಾಗೂ ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಕೆರೆ ಕೋಡಿ ಹರಿದು ಭತ್ತದ ಗದ್ದೆಗೆ ನೀರು ನುಗ್ಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.