ಕೆ.ಆರ್.ಪೇಟೆ: ‘ಸಮರ್ಥ ನಾಯಕ, ಬಸವಣ್ಣನವರ ಅನುಯಾಯಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜನ್ಮಕೊಟ್ಟ ಪುಣ್ಯಭೂಮಿ ಕೆ.ಆರ್.ಪೇಟೆ. ಕ್ಷೇತ್ರದಲ್ಲಿರುವ ಗೂಂಡಾಗಿರಿ ರಾಜಕಾರಣ ಅಂತ್ಯ ಮಾಡಿ ಮುಖ್ಯಮಂತ್ರಿಗಳು ತಮ್ಮ ಹುಟ್ಟೂರನ್ನು ರಾಮರಾಜ್ಯ ಮಾಡುತ್ತಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಶನಿವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ‘ಕೆ.ಸಿ.ನಾರಾಯಣಗೌಡರು ಹಣ ಹಾಗೂ ಅಧಿಕಾರಕ್ಕಾಗಿ ರಾಜೀನಾಮೆ ನೀಡಿಲ್ಲ. ಯಡಿಯೂರಪ್ಪ ಅವರ ಜೊತೆ ಸೇರಿ ಕ್ಷೇತ್ರವನ್ನು ರಾಮರಾಜ್ಯ ಮಾಡುತ್ತಾರೆ. ಮುಖ್ಯಮಂತ್ರಿಗಳು ಕೇಳಿದ್ದನ್ನು ಕೊಡುವ ಕಾಮಧೇನು. ಭಾಗ್ಯಲಕ್ಷ್ಮಿ ಯೋಜನೆ, ವಿಧವಾ ವೇತನ, ವಿದ್ಯಾರ್ಥಿನಿಯರಿಗೆ ಸೈಕಲ್, ಮಾಸಾಶನ ಕೊಟ್ಟಿದ್ದು ಯಡಿಯೂರಪ್ಪ. ಯುವ ಮುಖಂಡ ಬಿ.ವೈ.ವಿಜಯೇಂದ್ರ ಹಾಗೂ ನಾರಾಯಣಗೌಡ ಜೋಡೆತ್ತುಗಳು. ಅವರ ನೇತೃತ್ವದಲ್ಲಿ ಕ್ಷೇತ್ರದ ಅಭಿವೃದ್ಧಿ ನಡೆಯುತ್ತದೆ’ ಎಂದರು.
ನಾವು ಒಕ್ಕಲಿಗರಲ್ಲವೇ:
ಹಾಸನ ಶಾಸಕ ಪ್ರೀತಂ ಗೌಡ ಮಾತನಾಡಿ ‘ಒಕ್ಕಲಿಗರು ಅಂದರೆ ಕೇವಲ ಹೊಳೆನರಸೀಪುರ ಕುಟುಂಬದ ಸದಸ್ಯರು ಮಾತ್ರವೇ ಅಲ್ಲ. ನಮಗಾರಿಗೂ ದೇವೇಗೌಡ ಕುಟುಂಬದ ಜನ್ಮಪ್ರಮಾಣ ಪತ್ರ ಇಲ್ಲ ಅಂದಾಕ್ಷಣ ನಾವು ಒಕ್ಕಲಿಗರಲ್ಲವೇ? ಪ್ರೀತಂಗೌಡ, ಅಶ್ವತ್ಥ ನಾರಾಯಣ್ಗೌಡ, ನಾರಾಯಣಗೌಡ ಎಲ್ಲರೂ ಒಕ್ಕಲಿಗರೇ’ ಎಂದರು.
‘ಜೆಡಿಎಸ್ ಮುಖಂಡರು ಜೋಕರ್ ಕಾರ್ಡ್ ರೀತಿಯಲ್ಲಿ ಆಟವಾಡುತ್ತಾರೆ. 113 ಕ್ಷೇತ್ರ ಗೆಲ್ಲುತ್ತೇವೆ ಎಂದು ಅವರು ಎಂದಿಗೂ ಹೇಳುವುದಿಲ್ಲ. ಯಾವ ಪಕ್ಷಕ್ಕೂ ಬಹುಮತ ಬಾರದಿರಲಿ ಎಂದೇ ದೇವರಲ್ಲಿ ಕೇಳಿಕೊಳ್ಳುತ್ತಾರೆ. ಅಧಿಕಾರಕ್ಕಾಗಿ ಆ ಕಡೆ ಆದರೂ ಸರಿ, ಈ ಕಡೆ ಆದರೂ ಸರಿ ಎನ್ನುತ್ತಾರೆ. ನಾರಾಯಣಗೌಡ ಗೆದ್ದರೆ ಸಚಿವರಾಗಿ ಸೇವೆ ಮಾಡುತ್ತಾರೆ’ ಎಂದರು.
ಪಬ್ಲಿಕ್ನಲ್ಲಿ ಹೊಡಿಬೇಡಿ: ನಾರಾಯಣಗೌಡ
‘ಜೆಡಿಎಸ್, ಕಾಂಗ್ರೆಸ್ ಮುಖಂಡರು ನನಗೆ ಚಪ್ಪಲಿಯಲ್ಲಿ ಹೊಡೆಯಲು ಯತ್ನಿಸಿದ್ದಾರೆ. ಮುಂದೆ ಕಲ್ಲಿನಿಂದ ಹೊಡೆಸಲು ಮುಂದಾಗಿದ್ದಾರೆ. ಹೊಡೆಯಲೇ ಬೇಕು ಅಂದರೆ ಹೊಡೆಯಿರಿ, ಆದರೆ ಪಬ್ಲಿಕ್ನಲ್ಲಿ ಹೊಡೀಬೇಡಿ, ಜನರಿಗೆ ತೊಂದರೆಯಾಗುತ್ತದೆ. ನಮ್ಮ ಮನೆಗೆ ಬಂದು ಹೊಡೆಯಿರಿ’ ಎಂದು ಕೆ.ಸಿ.ನಾರಾಯಣಗೌಡ ವ್ಯಂಗ್ಯವಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.