
ಭಾರತೀನಗರ: ಸಮೀಪದ ಹುಣ್ಣನದೊಡ್ಡಿ ಗ್ರಾಮದಲ್ಲಿ ಎರಡು ಹುಲ್ಲಿನ ಬಣವೆಗೆ (ಮೆದೆಗೆ) ಕಿಡಿಗೇಡಿಗಳು ಬೆಂಕಿ ಹಾಕಿದ್ದು, ಎರಡೂ ಬಣವೆಗಳಲ್ಲಿನ ಹುಲ್ಲು ಸುಟ್ಟು ಭಸ್ಮವಾಗಿದೆ.
ಹುಣ್ಣನದೊಡ್ಡಿ ಗ್ರಾಮದ ಚಿಕ್ಕಣ್ಣನ ಮಗ ಕುಳ್ಳಯ್ಯ, ಚನ್ನೇಗೌಡರ ಮಗ ರವಿ ಎಂಬುವವರಿಗೆ ಸೇರಿದ ಹುಲ್ಲಿನ ಬಣವೆಗಳು ಭಸ್ಮಗೊಂಡಿದ್ದು, ಗುರುವಾರ ಸಂಜೆ 4.30 ರಲ್ಲಿ ಯಾರೂ ಇಲ್ಲದ ಸಮಯವನ್ನು ಗಮನಿಸಿದ ಕಿಡಿಗೇಡಿಗಳು ಕೃತ್ಯವೆಸಗಿದ್ದಾರೆ. ಬೆಂಕಿ ಕಂಡ ತಕ್ಷಣ ಗ್ರಾಮಸ್ಥರು ಅಗ್ನಿಶಾಮಕ ಠಾಣೆಗೆ ಸುದ್ದಿ ಮುಟ್ಟಿಸಿದ್ದು, ತುಸು ಸಮಯದಲ್ಲೇ ಸ್ಥಕ್ಕಾಗಮಿಸಿದ ಅಗ್ನಿಶಾಮಕ ದಳದವರು ಗ್ರಾಮಸ್ಥರೊಂದಿಗೆ ಬೆಂಕಿ ನಂದಿಸಿದ್ದಾರೆ.
ಚೆನ್ನಾಗಿ ಒಣಗಿದ್ದರಿಂದ ಆ ವೇಳೆಗಾಗಲೇ ಎರಡೂ ಬಣವೆಗಳಲ್ಲಿನ ಹುಲ್ಲು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಪಕ್ಕದಲ್ಲಿದ್ದ ಇನ್ನೂ 5 ಹುಲ್ಲಿನ ಬಣವೆಗಳಿದ್ದು, ಅವಕ್ಕೆ ಹಾನಿಯಾಗದಂತೆ ಬೆಂಕಿ ನಂದಿಸಲಾಗಿದೆ.
ಕಳೆದ ಒಂದು ವಾರದ ಹಿಂದೆಯೂ ಸಹ ಕಿಡಿಗೇಡಿಗಳು ಕಡಲೆಗೌಡರ ಶಿವು ಎಂಬುವವರ 3 ಎಕರೆ ಹುಲ್ಲಿಗೆ ಬೆಂಕಿ ಹಾಕಿದ್ದರು. ಈಗ ಮತ್ತೆ ಕಿಡಿಗೇಡಿಗಳು ಹುಲ್ಲಿನ ಮೆದೆಗೆ ಬೆಂಕಿ ಹಾಕಿರುವುದರಿಂದ ಗ್ರಾಮಸ್ಥರು ಆತಂಕ್ಕೆ ಒಳಗಾಗಿದ್ದಾರೆ. ಇದರ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ ಕಿಡಿಗೇಡಿಗಳನ್ನು ಪತ್ತೆಹಚ್ಚುವಂತೆ ಕುಳ್ಳಯ್ಯ, ರವಿ, ಶಿವು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.