ಶ್ರೀರಂಗಪಟ್ಟಣ: ತಾಲ್ಲೂಕಿನ ವಿವಿಧೆಡೆ ಕೊರೊನಾ ವಾರಿಯರ್ಗಳಾಗಿ ಕೆಲಸ ಮಾಡುವವರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಸ್ವಂತ ಹಣದಿಂದ ಬುಧವಾರ ಪಿಪಿಇ ಕಿಟ್ ಮತ್ತು ಮುಖಗವಸುಗಳನ್ನು ವಿತರಿಸಿದರು.
‘ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣಕ್ಕೆ 20 ಬಾಕ್ಸ್ಗಳಲ್ಲಿ ತಂದಿದ್ದ ಕಿಟ್ ಮತ್ತು ಮುಖಗವಸುಗಳನ್ನು ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ ಕೆಲಸ ಮಾಡುವವರಿಗೆ ವಿತರಣೆ ಮಾಡಲಾಯಿತು. ಅಗತ್ಯ ಬಿದ್ದರೆ ಮತ್ತಷ್ಟು ತರಿಸಿಕೊಡುತ್ತೇನೆ. ಆಂಬುಲೆನ್ಸ್ ಸಮಸ್ಯೆ ಇರುವುದರಿಂದ 5 ವಾಹನಗಳನ್ನು ಬಾಡಿಗೆಗೆ ಪಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಔಷಧ, ಸಿಬ್ಬಂದಿ, ವಾಹನ ಮತ್ತು ಕೋವಿಡ್ ಕೇರ್ ಕೇಂದ್ರಗಳಲ್ಲಿ ಇರುವವರಿಗೆ ಊಟೋಪಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಮುಸ್ಲಿಂ ವಸತಿ ಶಾಲೆಯ ನೂತನ ಕಟ್ಟಡದಲ್ಲಿರುವ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಲ್ಲಿ ಸಮಸ್ಯೆ ತೋಡಿಕೊಂಡರು. ‘ಐದಾರು ದಿನಗಳಿಂದ ಇರುವವರ ಜತೆಗೆ ಹೊಸದಾಗಿ ಬರುವ ಸೋಂಕಿತರನ್ನು ತಂದು ಇರಿಸಲಾಗುತ್ತಿದೆ. ಇದರಿಂದ ಮತ್ತೆ ಸೋಂಕು ಹರಡುವ ಭೀತಿ ಇದೆ’ ಎಂದರು.
‘ಬಿಸಿ ನೀರು ಸಿಗುತ್ತಿಲ್ಲ. ಮೊಟ್ಟೆ, ಬಾಳೆ ಹಣ್ಣುಗಳನ್ನು ಕೊಡುತ್ತಿಲ್ಲ’ ಎಂದು ಮತ್ತೆ ಕೆಲವರು ದೂರಿದರು.
‘ಇನ್ನು ಮುಂದೆ ವಾರದಲ್ಲಿ ಎರಡು ದಿನ ಮಾಂಸಾಹಾರ, ಪ್ರತಿ ದಿನ, ಮೊಟ್ಟೆ, ಬಾಳೆಹಣ್ಣು ಕೊಡಲು ವ್ಯವಸ್ಥೆ
ಮಾಡಿ’ ಎಂದು ಅಧಿಕಾರಿಗಳಿಗೆ ಹೇಳಿದರು.
‘ಜನರು ಮೇ ತಿಂಗಳ ಅಂತ್ಯದವರೆಗೆ ಅನಗತ್ಯವಾಗಿ ಮನೆಗಳಿಂದ ಹೊರಗೆ ಬರಬಾರದು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಎಂ.ವಿ.ರೂಪಾ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಭೈರಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸೌಮ್ಯಾ, ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಪಿ.ಮಾರುತಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ, ಪುರಸಭೆ ಸದಸ್ಯ ರವಿಕುಮಾರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯೆ ನಳಿನಾ ಸತ್ಯನಾರಾಯಣ ಇತರರು ಜತೆಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.