ಮಳವಳ್ಳಿ: ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕ ಹಾಗೂ ಪರಿಸರ ಬಳಗದ ಸದಸ್ಯರು ಪರಿಸರ ಸಂರಕ್ಷಕ ಕಲ್ಮನೆ ಕಾಮೇಗೌಡರ ಅವ ರನ್ನು ಭೇಟಿಯಾಗಿ ಕುಟುಂಬದ ಜೀವನ ನಿರ್ವ ಹಣೆಗಾಗಿ ₹ 20 ಸಾವಿರ ನೀಡಿದರು.
ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡ ಅವರ ಮನೆಗೆ ಭೇಟಿ ನೀಡಿದ ತಂಡ ಅವರ ಆರೋಗ್ಯ ವಿಚಾರಿಸಿದರು.
‘ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ ಅಲ್ಲಿನ ಸಿಬ್ಬಂದಿ ಹಣೆಯ ಮೇಲೆ ಹೊಡೆಯು
ತ್ತಿದ್ದರು. ಹೀಗಾಗಿ ಚಿಕಿತ್ಸೆ ಪಡೆಯದೆ ಆಸ್ಪತ್ರೆಯನ್ನು ತೊರೆದು ಮನೆಗೆ ಬರಬೇಕಾಯಿತು’ ಎಂದು ಮುಖಂಡರ ಬಳಿ ಕಣ್ಣೀರಿಟ್ಟರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೇಂಪೂಗೌಡ ಮಾತನಾಡಿ, 16 ಕಟ್ಟೆಗಳನ್ನು ನಿರ್ಮಿಸಿ ಪ್ರಾಣಿ-ಪಕ್ಷಿಗಳಿಗೆ ನೀರುಣಿಸಿದ ಕಾಮೇಗೌಡರಿಗೆ ಸರ್ಕಾರ ಪ್ರಶಸ್ತಿ ನೀಡಿ ಸನ್ಮಾನಿಸಿರಬಹುದು. ಆದರೆ, ಇಂದು ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಮೇಗೌಡ ಅವರ ಸಮಸ್ಯೆಯನ್ನು ಆಲಿಸಿ ಅವರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮಾಹಿತಿ ಪಡೆದು ಅದನ್ನು ಜಿಲ್ಲಾಡಳಿತ ಬಗೆಹರಿಸಬೇಕಿತ್ತು. ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಹಲ್ಲೆ ಮಾಡಿರುವುದು ಖಂಡನೀಯ. ಈ ಬಗ್ಗೆ ಕಾಳಜಿ ವಹಿಸಿ ಸರ್ಕಾರ ಭರವಸೆಯಂತೆ ನಡೆದುಕೊಳ್ಳಬೇಕು. ಅವರ ಅರೋಗ್ಯ ದಲ್ಲಿ ಚೇತರಿಕೆ ಕಾಣಬೇಕು ಎಂದು ಹೇಳಿದರು.
ಕಲ್ಮನೆ ಕಾಮೇಗೌಡ ಅವರನ್ನು, ಅವರ ಆಸ್ತಿಯನ್ನು ಸರ್ಕಾರ ರಕ್ಷಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಅಣ್ಣೂರು ಮಹೇಂದ್ರ ಆಗ್ರಹಿಸಿದರು.
ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಲಿಂಗಾಪ್ಪಾಚಿ, ಖಂಜಾಚಿ ಶೆಟ್ಟಹಳ್ಳಿ ರವಿಕುಮಾರ್, ಪಾಂಡವಪುರ ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕಾಡೆ ಹರೀಶ್, ಮಳವಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ನೆಲ್ಲೂರು ಜಯರಾಮ್, ಮುಖಂಡರಾದ ಎಚ್.ಎಲ್.ಪ್ರಕಾಶ್, ವಿಜಯ್ ಕುಮಾರ್, ಜಿ.ಎ.ಶಂಕರ್, ರಘು, ವರದರಾಜು, ಕೆ.ಸಿ.ಮಾದೇಗೌಡ, ಕೆ.ಎನ್.ಪುಟ್ಟಸ್ವಾಮಿ, ಶ್ರೀನಿವಾಸ್, ಮೂರ್ತಿ, ಸುದರ್ಶನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.