ADVERTISEMENT

ಟೀಕೆಗಳಿಗೆ ಉತ್ತರ ಕೊಡಲು ಸಮಯವಿಲ್ಲ: ಸಂಸದೆ ಎ. ಸುಮಲತಾ ತಿರುಗೇಟು

ಸಾಂಸ್ಕೃತಿಕ ಸಿರಿ ಸಂಜೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 9:47 IST
Last Updated 5 ಅಕ್ಟೋಬರ್ 2019, 9:47 IST
ಶ್ರೀರಂಗಪಟ್ಟಣ ದಸರಾ ಉತ್ಸವದ ನಿಮಿತ್ತ ಶುಕ್ರವಾರ ನಡೆದ ಸಾಂಸ್ಕೃತಿಕ ಸಿರಿ ಸಂಜೆ ಕಾರ್ಯಕ್ರಮವನ್ನು ಸಂಸದೆ ಸುಮಲತಾ ಉದ್ಘಾಟಿಸಿದರು (ಎಡಚಿತ್ರ). ಸಾಂಸ್ಕೃತಿಕ ಸಿರಿ ಸಂಜೆ ಕಾರ್ಯಕ್ರಮದಲ್ಲಿ ಶ್ರೀಹರ್ಷ ಗಾಯನ ಪ್ರಸ್ತುಪಡಿಸಿದರು
ಶ್ರೀರಂಗಪಟ್ಟಣ ದಸರಾ ಉತ್ಸವದ ನಿಮಿತ್ತ ಶುಕ್ರವಾರ ನಡೆದ ಸಾಂಸ್ಕೃತಿಕ ಸಿರಿ ಸಂಜೆ ಕಾರ್ಯಕ್ರಮವನ್ನು ಸಂಸದೆ ಸುಮಲತಾ ಉದ್ಘಾಟಿಸಿದರು (ಎಡಚಿತ್ರ). ಸಾಂಸ್ಕೃತಿಕ ಸಿರಿ ಸಂಜೆ ಕಾರ್ಯಕ್ರಮದಲ್ಲಿ ಶ್ರೀಹರ್ಷ ಗಾಯನ ಪ್ರಸ್ತುಪಡಿಸಿದರು   

ಶ್ರೀರಂಗಪಟ್ಟಣ: ‘ರಾಜಕೀಯ ಪ್ರೇರಿತ ಟೀಕೆಗಳಿಗೆ ಪ್ರತಿಕ್ರಿಯೆಕೊಡುತ್ತ ಸಮಯ ವ್ಯರ್ಥ ಮಾಡಲು ನನ್ನಲ್ಲಿ ಸಮಯ ಇಲ್ಲ’ ಎಂದು ಸಂಸದೆ ಎ. ಸುಮಲತಾ ಹೇಳಿದರು.

ಇಲ್ಲಿನ ಶ್ರೀರಂಗ ವೇದಿಕೆಯಲ್ಲಿ ಶುಕ್ರವಾರ ಸಂಜೆ ನಡೆದ ಸಾಂಸ್ಕೃತಿಕ ಸಿರಿ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ಜಿಲ್ಲೆಯ ಜನರಿಗೆ ಮಾತ್ರ ಜವಾಬ್ದಾರಳು. ರಾಜಕಾರಣಿಗಳ ಟೀಕೆಗಳಿಗೆ ಜನರು ತಲೆ ಕೆಡಿಸಿಕೊಳ್ಳಬಾರದು. ಮಾಧ್ಯಮದವರು ಟೀಕೆಗಳಿಗೆ ಪ್ರತಿಕ್ರಿಯೆ ಕೇಳಿದಾಗ ಬೇಜಾರಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಹೇಳಿದಂತೆ ನಡೆದುಕೊಳ್ಳುತ್ತಿದ್ದೇನೆ. ಪಾರ್ಲಿಮೆಂಟ್‌ನಲ್ಲಿ ಜನರ ದನಿಯಾಗಿದ್ದೇನೆ. ಈ ಮೊದಲು ಇದ್ದ ಸಂಸದರು ಏಕೆ ಜಿಲ್ಲೆಯ ಬಗ್ಗೆ ದನಿ ಎತ್ತಲಿಲ್ಲ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ನಾನು ಅಂಬರೀಷ್‌ ಅವರ ಪತ್ನಿ. ಅಂಬರೀಷ್‌ ಅವರನ್ನು 3 ಬಾರಿ ಸಂಸದರನ್ನಾಗಿ, ಒಮ್ಮೆ ಸಚಿವರನ್ನಾಗಿ ಮಂಡ್ಯ ಜನರು ಆಯ್ಕೆ ಮಾಡಿದ್ದಾರೆ. ಸದ್ಯ ಜಿಲ್ಲೆಯ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಜನರು ಕಷ್ಟದಿಂದ ಪಾರಾಗುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದರು.

‘ಶ್ರೀರಂಗಪಟ್ಟಣವನ್ನು ದೇಶದ ಅತ್ಯುತ್ತಮ ಪ್ರವಾಸಿ ತಾಣ ಮಾಡುವ ಆಸೆ ನನ್ನದು. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಈ ಬಗ್ಗೆ ಪ್ರಸ್ತಾಪಿಸಿದ್ದು, ಅವರ ಜತೆಗೂಡಿ ಶ್ರಮಿಸುತ್ತೇನೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್‌, ಹೆಚ್ಚುವರಿ ಡಿಸಿ ಟಿ. ಯೋಗೇಶ್‌, ಉಪ ವಿಭಾಗಾಧಿಕಾರಿ ಶೈಲಜಾ ಇದ್ದರು.

ಶ್ರೀಹರ್ಷ ಹಾಡಿನ ಮೋಡಿ
ಹಿನ್ನೆಲೆ ಗಾಯಕ ಶ್ರೀ ಹರ್ಷ ಮತ್ತು ತಂಡ ‘ತರವಲ್ಲ ತಗಿ ನಿನ್ನ...’, ‘ತಾಳಿ ಕಟ್ಟುವ ಶುಭ ವೇಳೆ...’, ‘ಏರಿ ಮೇಲೆ ಏರಿ...’, ‘ಸಾಗರಿಯೇ ಸಾಗರಿಯೇ...’, ‘ಕೇಳದೆ ನಿಮಗೀಗ....’, ‌‘ಓ ಗೆಳೆಯಾ ಜೀವದ್ಗೆಳೆಯ...’ ಸೇರಿದಂತೆ ವಿವಿಧ ಹಾಡುಗಳನ್ನು ಹಾಡಿದ್ದು, ಪ್ರೇಕ್ಷಕರ ಮನಗೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.