ಮೇಲುಕೋಟೆ: ಇಲ್ಲಿನ ಚೆಲುವ ನಾರಾಯಣ ಸ್ವಾಮಿ ದೇಗುಲದಲ್ಲಿ ಹೊಸವರ್ಷ, ಧನುರ್ಮಾಸದ ಅಂಗವಾಗಿ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದರು.
ವಿಶೇಷ ಪುಷ್ಪದ ಹಾರಗಳಿಂದ ಕಂಗೊಳಿಸಿದ ಚೆಲುವನಾರಾಯಣ ಸ್ವಾಮಿ, ರಾಮಾನುಜಾಚಾರ್ಯ, ಯದುಗಿರಿನಾಯಕಿ ಅಮ್ಮನವರ ದರ್ಶನಕ್ಕೆ ಸುಡುಬಿಸಿಲಲ್ಲೂ ನಡೆದು ಬಂದ ಜನರು ದೇಗುಲ ಹೊರಭಾಗದಿಂದ ಸರತಿ ಸಾಲಿನಲ್ಲಿ ನಿಂತ ಭಕ್ತರು ಗೋವಿಂದ– ಗೋವಿಂದ ಎಂಬ ಜಯಘೋಷ ಮೊಳಗಿಸಿ ದರ್ಶನ ಪಡೆದರು.
ಸೂರ್ಯೋದಯಕ್ಕೂ ಮುನ್ನ ದೇವಾಲಯದಲ್ಲಿ ಪಾರಾಯಣದೊಂದಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಪಂಚಕಲ್ಯಾಣಿ, ಅಕ್ಕ ತಂಗಿಕೊಳ, ರಾಯಗೋಪುರ, ಧನುಷ್ಕೋಟಿ, ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲೂ ಪ್ರವಾಸಿಗರಿಂದ ತುಂಬಿ ಹೋಗಿದ್ದವು. ಮೇಲುಕೋಟೆ ಪ್ರಾಥಮಿಕ ಸರ್ಕಾರಿ ಆಸ್ವತ್ರೆಯ ಎದುರು ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ವಾಹನ ಸಂದಣಿ ಹೆಚ್ಚಿದ್ದರಿಂದ ಸಂಚಾರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಟ್ಟರು. ಯೋಗಾನರಸಿಂಹ ಸ್ವಾಮಿ ಬೆಟ್ಟದ ಮಧ್ಯದವರೆಗೂ ಭಕ್ತರು ಸಾಲಿನಲ್ಲಿ ನಿಂತು ನಿಧಾನವಾಗಿ ದೇವರ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.