ಮೇಲುಕೋಟೆ (ಮಂಡ್ಯ): ಇಲ್ಲಿನ ಚೆಲುವನಾರಾಯಣಸ್ವಾಮಿ ದೇಗುಲದಲ್ಲಿ ಗುರುವಾರ ರಾತ್ರಿ ಗರ್ಭಗುಡಿಯ ಮುಂಭಾಗ ಬೆತ್ತಲಾಗಿ ನಿಂತು ರಂಪಾಟ ಮಾಡಿದ ಸ್ಥಳೀಯ ಯುವಕ ರಾಮ್ಕುಮಾರ್ ವಿರುದ್ಧ ಶುಕ್ರವಾರ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೇವಾಲಯದ ಮುಂದೆ ಚುರುಮುರಿ ಮಾರಾಟ ಮಾಡಿ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದ ಯುವಕ ರಾತ್ರಿ 9ರ ಸುಮಾರಿನಲ್ಲಿ ದೇವಾಲಯದ ಬಾಗಿಲು ಮುಚ್ಚುತ್ತಿದ್ದಾಗ ಶುಕನಾಸಿಗೆ ಓಡಿ ಬಂದು ‘ನಾನು ದೇವರ ತಮ್ಮ, ಅವನ ಪಕ್ಕದಲ್ಲೇ ನಿಲ್ಲುತ್ತೇನೆ’ ಎಂದು ಹುಚ್ಚಾಟ ಮಾಡಿದ್ದಾನೆ. ನಂತರ ‘ನಾನೇ ರಾಮ, ನಾನೇ ಅಲ್ಲಾ’ ಎಂದುಕಿರುಚಾಡಿದ್ದ.
ಕಾವಲುಗಾರರು ಆತನನ್ನು ಹೊರಹಾಕಲು ಪ್ರಯತ್ನಿಸಿದಾಗ ಬೆತ್ತಲಾಗಿ ರಂಪಾಟ ಮಾಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರ ಮುಂದೆಯೂ ರಂಪಾಟ ಮಾಡಿ ದೇವಾಲಯಕ್ಕೆ ನುಗ್ಗಲು ಪ್ರಯತ್ನಿಸಿದ್ದಾರೆ. ನಂತರ ದೇವಾಲಯದ ಸಿಬ್ಬಂದಿ ಆತನನ್ನು ಥಳಿಸಿದ್ದಾರೆ. ಆತನ ದುರ್ವರ್ತನೆಗೆ ಗಾಂಜಾ ಸೇವನೆಯೇ ಕಾರಣ ಎಂದು ದೇವಾಲಯದ ಸಿಬ್ಬಂದಿ ಆರೋಪಿಸಿದ್ದಾರೆ.
ಘಟನಾವಳಿ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಮಂಗಳಮ್ಮ ದೂರು ನೀಡಿದ್ದಾರೆ.
‘ಯುವಕ ಈಚೆಗೆ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಜಿಲ್ಲಾ ಘಟಕದ ಅಧ್ಯಕ್ಷನಾಗಿ ಪದಗ್ರಹಣ ಮಾಡಿರುವುದಾಗಿ ಹೇಳಿಕೊಂಡು ಮನೆಯಲ್ಲೇ ಮಂಡ್ಯ ಜಿಲ್ಲಾ ಘಟಕದ ಕಚೇರಿ ತೆರೆದಿರುವುದಾಗಿ ಹೇಳಿಕೊಳ್ಳುತ್ತಿದ್ದ’ ಎಂದುದೇವಾಲಯದ ಪರಿಚಾರಕ ಎಂ.ಎನ್.ಪಾರ್ಥಸಾರಥಿ ತಿಳಿಸಿದ್ದಾರೆ.
‘ಮೂರು ದಿನಗಳ ಹಿಂದೆ ರಾತ್ರಿ 12 ಗಂಟೆ ವೇಳೆ ಯುವಕ ದೇವಾಲಯದ ಬಳಿ ಬಂದಿದ್ದಾಗ ಎಚ್ಚರಿಸಿ ಕಳಿಸಲಾಗಿತ್ತು. ಮತ್ತೆ ಗುರುವಾರ ರಾತ್ರಿ ಬಂದು ರಂಪಾಟ ಮಾಡಿದ್ದಾನೆ’ ಎಂದು ಎಂದು ಭದ್ರತಾ ಸಿಬ್ಬಂದಿ ಮಾಹಿತಿ ನೀಡಿದರು.
‘ಮಂಡ್ಯ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರನ್ನು ನೇಮಕ ಮಾಡಿಲ್ಲ’ ಎಂದು ಎಎಪಿ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.