ಮದ್ದೂರು: ಉದ್ದೇಶಿತ ಮದ್ದೂರು ನಗರಸಭೆಗೆ ನಾಲ್ಕು ಗ್ರಾಮ ಪಂಚಾಯತಿ ಸೇರ್ಪಡೆ ಪ್ರಸ್ತಾವ ವಿರೋಧಿಸಿ ನಾಲ್ಕು ಗ್ರಾಮ ಪಂಚಾಯಿತಿ ಹೋರಾಟ ಸಮಿತಿ ವತಿಯಿಂದ ಸೋಮವಾರ ಹೆದ್ದಾರಿ ತಡೆ ನಡೆಸಿ ನಂತರ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನೇತೃತ್ವ ವಹಿಸಿದ್ದ ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ‘ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ನಗರಸಭೆಗೆ ಸೇರ್ಪಡೆಯಿಂದ ಹಲವು ಅನಾನುಕೂಲಗಳಾಗುತ್ತವೆ. ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಪಾಂಕ ಸಿಗುವುದಿಲ್ಲ. ನೀರಿನ ತೆರಿಗೆ, ಮನೆ ಕಂದಾಯ ಹೆಚ್ಚಾಗುತ್ತದೆ, ವಸತಿ ಯೋಜನೆ ಕಡಿಮೆಯಾಗುತ್ತದೆ’ಎಂದು ಆರೋಪಿಸಿದರು.
‘ನರೇಗಾ ಯೋಜನೆಯ ಸೌಲಭ್ಯಗಳು ಇರುವುದಿಲ್ಲ. ಸ್ವಚ್ಛತೆ ವಿಳಂಬವಾಗುತ್ತದೆ. ಕನಿಷ್ಠ ವೇತನ ಹಾಗೂ ಉದ್ಯೋಗ ಸಿಗುವುದಿಲ್ಲ. ಇ-ಖಾತೆಗೆ ಹಾಗೂ ಅಭಿವೃದ್ಧಿ ತೆರಿಗೆ ದುಪ್ಪಟ್ಟಾಗುತ್ತದೆ. ಸಾರ್ವಜನಿಕ ಆಸ್ತಿಗಳನ್ನು ನೋಂದಣಿ ಮತ್ತು ವಿಭಾಗ ಪತ್ರ ಮತ್ತು ಖರೀದಿ ಶುಲ್ಕಗಳು ಹೆಚ್ಚಾಗುತ್ತವೆ’ ಎಂದರು.
‘ಗ್ರಾಮಾಂತರ ಪ್ರದೇಶದಲ್ಲಿ ಬಡ ರೈತರು, ಕೃಷಿ ಕೂಲಿ ಕಾರ್ಮಿಕರು ವಾಸಿಸುತ್ತಿದ್ದು, ನಗರಸಭೆಯಾದರೆ ಇವರು ಅತಿ ಹೆಚ್ಚು ತೆರಿಗೆ ಕಟ್ಟಲು ಸಾಧ್ಯವಿಲ್ಲ. ಜತೆಗೆ ಸ್ವಸಹಾಯ ಸಂಘಗಳು, ಮೈಕ್ರೋ ಫೈನಾನ್ಸ್ಗಳಿಂದ ಸಾಲ ಪಡೆದು ಕಟ್ಟಲಾಗದೆ ಕೆಲವರು ಗ್ರಾಮ ಬಿಟ್ಟಿದ್ದಾರೆ. ಆದ್ದರಿಂದ ಗ್ರಾಮಗಳನ್ನು ಗ್ರಾಮವನ್ನಾಗಿ ಬಿಟ್ಟು ನಗರಸಭೆ ಮಾಡುವ ಆಲೋಚನೆಯನ್ನು ಬಿಟ್ಟು ಬಿಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ತಾಲ್ಲೂಕು ಕಚೇರಿಗೆ ಆಗಮಿಸಿ ಗ್ರೇಡ್– 2 ತಹಶೀಲ್ದಾರ್ ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮುಖಂಡರಾದ ಗೊರವನಹಳ್ಳಿ ಪ್ರಸನ್ನ, ಮಹೇಶ್, ಸೋಮನಹಳ್ಳಿ ಅನ್ನದಾನಿ, ಸತೀಶ್, ಜಿ.ಎ.ಶಂಕರ್, ಮೋಹನ್, ವೀರಪ್ಪ, ರಾಮಣ್ಣ, ಸಿದ್ದರಾಜು, ಜಿ.ಸಿ.ಮಹೇಂದ್ರ, ನವೀನ, ಅಂಬರೀಷ್, ಸುರೇಶ್ ಹಾಜರಿದ್ದರು.
Highlights - ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ಕೆಲಕಾಲ ಸಂಚಾರ ಅಸ್ತವ್ಯಸ್ತ ಪ್ರಸ್ತಾವ ಕೈಬಿಡದಿದ್ದರೆ ಹೋರಾಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.