ಪಾಂಡವಪುರ: ‘ಪಟ್ಟಣದ ಒಳಚರಂಡಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ರೈತರಿಂದ ಸ್ವಾಧೀನಪಡಿಸಿದ ಜಮೀನಿನ ಪರಿಹಾರ ₹ 24ಕೋಟಿ ಮೊತ್ತ ಬಿಡುಗಡೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಲಭ್ಯವಿರುವ ₹4ಕೋಟಿ ನೀಡುವುದಾಗಿ ಇಲಾಖೆ ಕಾರ್ಯದರ್ಶಿ, ಕೆಯುಐಡಿಎಫ್ಸಿ ವ್ಯವಸ್ಥಾಪಕರು ತಿಳಿಸಿದ್ದಾರೆ’ ಎಂದು ಮುಖ್ಯಾಧಿಕಾರಿ ಸತೀಶ್ ಕುಮಾರ್ ತಿಳಿಸಿದರು.
ಅಧ್ಯಕ್ಷೆ ಜ್ಯೋತಿಲಕ್ಷ್ಮಿ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು. ಸಂತೆ ಮೈದಾನದಲ್ಲಿ ಸೂಪರ್ ಮಾರ್ಕೇಟ್ ಮತ್ತು ಮಳಿಗೆಗಳನ್ನು ಕೆಯುಐಡಿಎಫ್ಸಿಯಿಂದ ₹ 5ರಿಂದ ₹10ಕೋಟಿ ಸಾಲ ಪಡೆದು ನಿರ್ಮಿಸಲಾಗುವುದು. 30 ವರ್ಷಗಳ ಹಿಂದೆ ಹರಾಜು ನಡೆದಿದೆ ಹೊಸ ನಿಯಮದ ಪ್ರಕಾರ ವಾಣಿಜ್ಯ ಮಳಿಗೆ ಬಾಡಿಗೆ ವಸೂಲಿಗೆ ಕ್ರಮಕೈಗೊಳ್ಳಲಾಗಿದ್ದು, ಸಭೆಯ ಒಪ್ಪಿಗೆ ಬೇಕು ಎಂದು ಮನವಿ ಮಾಡಿದರು.
ಸದಸ್ಯ ಚಂದ್ರು ಮಾತನಾಡಿ, ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿರುವ ಬಳಿಯ ವಾಣಿಜ್ಯ ಸಂಕೀರ್ಣದ ಮೊದಲನೇ ಮಹಡಿಯ ವಿಶಾಲವಾದ ಎರಡು ಮಳಿಗೆಗಳನ್ನು ವ್ಯಕ್ತಿಯೊಬ್ಬರಿಗೆ ಕರಾರಿನಲ್ಲಿ ಬಾಡಿಗೆ ನೀಡಲಾಗಿತ್ತು. ಬಾಡಿಗೆ ಪಡೆದ ವ್ಯಕ್ತಿ ಈ 2 ಮಳಿಗೆಗಳನ್ನು 6 ಮಳಿಗೆಗಳಾಗಿ ಮಾರ್ಪಾಡು ಮಾಡಿ ಬೇರೆಯವರಿಗೆ ಪರಭಾರೆ ಮಾಡಿದ್ದಾರೆ. ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪುರಸಭೆ ಆರ್ಥಿಕ ಸಂಪನ್ಮೂಲದ ಕೊರತೆಯಿಂದ ನರಳುತ್ತಿದೆ. ಹೊರಗುತ್ತಿಗೆ ನೌಕರರ ಗುತ್ತಿಗೆ ಪಡೆದಿರುವ ವ್ಯಕ್ತಿ ನೌಕರರ ಭವಿಷ್ಯ ನಿಧಿ ಪಾವತಿಸದ ಕಾರಣ ಪುರಸಭೆ ₹ 26ಲಕ್ಷವನ್ನು ಭವಿಷ್ಯ ನಿಧಿಗೆ ಭರಿಸಿದೆ ಎಂದು ಆರೋಪಿಸಿದರು.
ಸದಸ್ಯ ಪಾರ್ಥಸಾರಥಿ ಮಾತನಾಡಿ, ಖಾಸಗಿ ವ್ಯಕ್ತಿಗಳು ಪುರಸಭೆ ವಾಣಿಜ್ಯ ಮಳಿಗೆಯನ್ನು ₹ 16ಲಕ್ಷಕ್ಕೆ ಪರಭಾರೆ ಮಾಡಿದ್ದಾರೆ. ಕೆಲವರು ಹೆಚ್ಚಿನ ಮುಂಗಡ ಹಣ ಪಡೆದು ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಪುರಸಭೆಯ 82 ವಾಣಿಜ್ಯ ಮಳಿಗೆಗಳನ್ನು ₹150ರಿಂದ ₹200ರಂತೆ ಬಾಡಿಗೆ ಪಡೆಯಲಾಗುತ್ತಿದೆ, ಹೆಚ್ಚಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಉಪಾಧ್ಯಕ್ಷ ಎಲ್.ಅಶೋಕ, ಸದಸ್ಯರಾದ ಅರ್ಚನಾ ಚಂದ್ರು, ಉಮಾಶಂಕರ್, ಆರ್.ಸೋಮಶೇಖರ್, ಶಿವಕುಮಾರ್, ಗೀತಾ ಅರ್ಮುಗಂ, ಖಮ್ಮರುನ್ನೀಸಾ, ಇಮ್ರಾನ್ ಪಾಷ, ಜಯಲಕ್ಷಮ್ಮ, ಎಂ.ಗಿರೀಶ್ ಹಾಗೂ ಅಧಿಕಾರಿಗಳಾದ ಯಶಸ್ವಿನಿ, ಮಣಿಪ್ರಸಾದ, ನಾಗೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.