ಮಂಡ್ಯ: ಜನತಾ ಶಿಕ್ಷಣ ಟ್ರಸ್ಟ್ನ ಸಮೂಹ ಸಂಸ್ಥೆಗಳ ನೌಕರರ ವರ್ಗದ ವತಿಯಿಂದ ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ಸೋಮವಾರ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ 20 ಐಸಿಯು ಮಾನಿಟರ್ಗಳನ್ನು ಸೋಮವಾರ ಹಸ್ತಾಂತರಿಸಲಾಯಿತು.
ಐಸಿಯುನಲ್ಲಿ ಉಪಯೋಗಿಸುವ ₹11 ಲಕ್ಷ ಮೌಲ್ಯದ ಮಾನಿಟರ್ಗಳನ್ನು ನೌಕರರ ಪರವಾಗಿ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅವರು ಮಿಮ್ಸ್ ನಿರ್ದೇಶಕ ಡಾ.ಎಂ.ಆರ್. ಹರೀಶ್ ಅವರಿಗೆ ಹಸ್ತಾಂತರಿಸಿದರು.
ನಂತರ ಮಾತನಾಡಿದ ವಿಜಯಾನಂದ ‘ಪಿಇಎಸ್ ಸಮೂಹ ವಿದ್ಯಾ ಸಂಸ್ಥೆಗಳ ಸಿಬ್ಬಂದಿ ಒಂದು ದಿನದ ₹ 10.80 ಲಕ್ಷ ಸಂಬಳದಲ್ಲಿ 20 ಮಾನಿಟರ್ಗಳನ್ನು ನೀಡಲಾಗಿದೆ. ಇಸಿಜಿ, ಬಿಪಿ, ಉಷ್ಣಾಂಶ, ಆಮ್ಲಜನಕ ಪ್ರಮಾಣ, ಉಸಿರಾಟದ ಪರಿಮಾಣವನ್ನು ಈ ಮಾನಿಟರ್ ತೋರಿಸಲಿದ್ದು, ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಇದು ನೆರವಾಗಲಿದೆ. ಸಂಸ್ಥೆಯ ಸಿಬ್ಬಂದಿ ನೆರವು ಅಪಾರವಾಗಿದೆ’ ಎಂದು ಶ್ಲಾಘಿಸಿದರು.
‘ಪೊಲೀಸ್, ಜಿಲ್ಲಾಡಳಿತ, ವೈದ್ಯರು ಕೋವಿಡ್ ತಡೆಗಟ್ಟಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ನಾವೆಲ್ಲರೂ ನಮ್ಮ ಕೈಯಲ್ಲಿ ಆದ ನೆರವನ್ನು ನೀಡುತ್ತಿದ್ದೇವೆ. ಕೊರೊನಾ ನಿರ್ಮೂಲನೆಯಲ್ಲಿ ನಾವೆಲ್ಲರೂ ಕೈ ಜೋಡಿಸಬೇಕು. ಗುರುಶ್ರೀ ಚಿತ್ರಮಂದಿರದ ಮುಂದಿರುವ ಪಿಇಎಸ್ ಪದವಿ ಕಾಲೇಜು ಹಾಸ್ಟೆಲ್ ಅನ್ನು ಕೋವಿಡ್ ಕೇರ್ ಕೇಂದ್ರಕ್ಕೆ ನೀಡಲು ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ. ಬಳಸಿದ ನಂತರ ಸ್ಯಾನಿಟೈಸ್ ಮಾಡಿ ನಮಗೆ ನೀಡಬೇಕು’ ಎಂದು ಹೇಳಿದರು.
ತಹಶೀಲ್ದಾರ್ ಚಂದ್ರಶೇಖರ್ ಶಂ. ಗಾಳಿ, ಮಿಮ್ಸ್ ಹಿರಿಯ ವೈದ್ಯಾಧಿಕಾರಿ ಡಾ.ಶ್ರೀಧರ್, ಜನತಾ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಎಸ್. ಎಲ್. ಶಿವ ಪ್ರಸಾದ್, ಜಂಟಿ ಕಾರ್ಯದರ್ಶಿ ಕೆ.ಆರ್. ದಯಾನಂದ್, ರಾಮಲಿಂಗಯ್ಯ , ಪ್ರಾಂಶುಪಾಲ ಆರ್.ಎಂ.ಮಹಾಲಿಂಗೇಗೌಡ, ಜೆ. ಮಹದೇವ, ವಿ.ಡಿ.ಸುವರ್ಣ, ಬಿ.ಎಸ್.ಶಿವಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.