ಶ್ರೀರಂಗಪಟ್ಟಣದ ಸ್ನಾನ ಘಟ್ಟದ ಬಳಿ, ಕಾವೇರಿ ನದಿ ತೀರದಲ್ಲಿ ಪಿತೃಗಳಿಗೆ ತರ್ಪಣ ಬಿಡಲು ಭಾನುವಾರ ಸೇರಿದ್ದ ಜನ
ಶ್ರೀರಂಗಪಟ್ಟಣ: ಬಾದ್ರಪದ ಬಿದಿಗೆಯ ಪಾಡ್ಯದಿಂದ ಕೃಷ್ಣ ಪಕ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ ತಮ್ಮ ಪಿತೃಗಳಿಗೆ ತಿಲ ತರ್ಪಣ ಮತ್ತು ಪಿಂಡ ಪ್ರದಾನ ಮಾಡಲು ಪಟ್ಟಣದ ಆಸುಪಾಸಿನ ಕಾವೇರಿ ನದಿ ತೀರದಲ್ಲಿ ಜನ ಜಾತ್ರೆಯೇ ಸೇರುತ್ತಿದೆ.
ಪಟ್ಟಣದ ಪಶ್ಚಿಮವಾಹಿನಿ, ಕಾವೇರಿ ಸ್ನಾನಘಟ್ಟ, ದೊಡ್ಡ ಗೋಸಾಯಿಘಾಟ್, ಕಾವೇರಿ ಸಂಗಮ ಇತರೆಡೆ ಬೆಳಿಗ್ಗೆಯಿಂದ ಸಂಜೆ ವರೆಗೆ ಜನರ ಗುಂಪು ಕಂಡು ಬರುತ್ತಿದೆ. ಸೆ.8ರಿಂದ ಪಿತೃಪಕ್ಷ ಆರಂಭವಾಗಿದ್ದು, ಇಹಲೋಕ ತ್ಯಜಿಸಿದ ತಮ್ಮ ತಂದೆ–ತಾಯಿ, ತಾತ– ಅಜ್ಜಿ, ಮುತ್ತಾತ– ಮುತ್ತಜ್ಜಿಯರ ಹೆಸರಿನಲ್ಲಿ ತಿಲ ತರ್ಪಣ ಮತ್ತು ಪಿಂಡ ಪ್ರದಾನ ಮಾಡುತ್ತಿದ್ದಾರೆ. ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಜನರು ಇಲ್ಲಿಗೆ ಬರುತ್ತಿದ್ದಾರೆ. ಹಾಗಾಗಿ ನದಿ ತೀರಗಳಲ್ಲಿ ವಾಹನ ದಟ್ಟಣೆ ಕೂಡ ಕಂಡು ಬರುತ್ತಿದೆ.
ಕನ್ಯಾ ಮಾಸದಲ್ಲಿ ಪಿತೃಗಳು ಹಸು, ಹದ್ದು, ಮೀನು, ಕಾಗೆಯ ರೂಪದಲ್ಲಿ ತರ್ಪಣ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ ತಮ್ಮ ಪಿತೃಗಳ ಋಣ ತೀರಿಸಲು ಪಿಂಡ ಪ್ರದಾನ, ತರ್ಪಣಾದಿಗಳು ನಡೆಯುತ್ತಿವೆ.
‘ಮಹಾಲಯ ಅಮಾವಾಸ್ಯೆ ಪಕ್ಷದಲ್ಲಿ, ನವರಾತ್ರಿ ಆರಂಭಕ್ಕೂ ಮುನ್ನ ಪಿತೃ ಲೋಕ ಭೂಲೋಕಕ್ಕೆ ಹತ್ತಿರ ಇರುತ್ತದೆ ಎಂಬ ವೈಜ್ಞಾನಿಕ ಕಾರಣವಿದೆ. ಈ 15 ದಿನಗಳ ಅವಧಿಯಲ್ಲಿ ನಮ್ಮನ್ನು ಅಗಲಿದ ಪಿತೃಗಳಿಗೆ ತರ್ಪಣ ಅರ್ಪಿಸಿದರೆ ಅವರು ಸ್ವೀಕರಿಸುತ್ತಾರೆ. ಹಾಗಾಗಿ ಇದು ಪಿಂಡ ಪ್ರದಾನ ಮತ್ತು ತಿಲ ತರ್ಪಣಕ್ಕೆ ಸಕಾಲ’ ಎಂದು ವೈದಿಕರಾದ ಕೆ.ಎಸ್. ಲಕ್ಷ್ಮೀಶ ಶರ್ಮಾ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.