ಮಳವಳ್ಳಿ ಪಟ್ಟಣದ ಗಾಯತ್ರಿ ಭವನದಲ್ಲಿ ತಾಲ್ಲೂಕು ಸಂಪೂರ್ಣ ಸಾವಯವ ಕೃಷಿಕರ ಸಂಘದ ಆಯೋಜಿಸಿದ ಕಾರ್ಯಾಗಾರದಲ್ಲಿ ರಾಗಿಯಿಂದ 28 ಬಗೆಯ ತಿಂಡಿ ತಿನಿಸುಗಳನ್ನು ತಿಪಟೂರಿನ ಪ್ರಗತಿಪರ ರೈತ ಮೋಹನ್ ಕುಮಾರ್ ತಯಾರಿಸಿದರು
ಮಳವಳ್ಳಿ: ಒಂದು ಕೆ.ಜಿ ರಾಗಿಯಿಂದ ₹800 ಮೌಲ್ಯದ ತಿಂಡಿ ತಿನಿಸು ತಯಾರಿಸಬಹುದು. ನೈಸರ್ಗಿಕವಾಗಿ ಬೆಳೆದ ರಾಗಿಯನ್ನು ಬಳಸುವುದರಿಂದ ಉತ್ತಮ ಆರೋಗ್ಯ ಸಿಗಲಿದೆ ಎಂದು ತಿಪಟೂರಿನ ಪ್ರಗತಿಪರ ರೈತ ಮೋಹನ್ ಕುಮಾರ್ ತಿಳಿಸಿದರು.
ಪಟ್ಟಣದ ಗಾಯತ್ರಿ ಭವನದಲ್ಲಿ ಬುಧವಾರ ತಾಲ್ಲೂಕು ಸಂಪೂರ್ಣ ಸಾವಯವ ಕೃಷಿಕರ ಸಂಘ ಆಯೋಜಿಸಿದ್ದ ರಾಗಿ ಮೌಲ್ಯ ವರ್ಧನೆ ಮಾಡಿ ವಿವಿಧ ಆಹಾರ ಪದಾರ್ಥ ತಯಾರಿಸುವ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಸುಮಾರು 28 ವಿಧದ ಪೌಷ್ಟಿಕಯುಕ್ತ ತಿಂಡಿ ತಿನಿಸುಗಳು, ಆಹಾರ ಪದಾರ್ಥಗಳನ್ನು ರಾಗಿಯಿಂದ ತಯಾರಿಸಬಹುದು. ₹40 ಬೆಲೆಯ ಒಂದು ಕೆ.ಜಿ ರಾಗಿಯಿಂದ ಹಲವು ತಿಂಡಿ ತಿನಿಸುಗಳನ್ನು ಮಾಡಬಹುದು. ಇದರಿಂದ ಗ್ರಾಮೀಣ ಪ್ರದೇಶ ಮಹಿಳೆಯರು ಸ್ವಾವಲಂಬಿ ಬದುಕು ಸಾಧಿಸಬಹುದು. ಈಗಾಗಲೇ ಸಾವಯವ ಕೃಷಿ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಸಂಪೂರ್ಣ ಸಾವಯವ ಕೃಷಿಕರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ಮಾತನಾಡಿ, ರಾಗಿಯಲ್ಲಿ ತಯಾರಿಸಿದ ತಿಂಡಿ ತಿನಿಸುಗಳು ಆರೋಗ್ಯಕ್ಕೆ ಪೂರಕವಾಗಿರಲಿವೆ. ನೈಸರ್ಗಿಕವಾಗಿ ಬೆಳೆದ ರಾಗಿಯಿಂದ ರಾಗಿ ಪುಡಿ, ನಿಪ್ಪಟ್ಟು, ಚಕ್ಕುಲಿ ವಿವಿಧ ತಿಂಡಿ ತಿನಿಸುಗಳನ್ನು ತಯಾರಿಸಿ, ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದರ ಮೂಲಕ ಉತ್ತಮ ಲಾಭ ಗಳಿಸಬಹುದು ಎಂದು ತಿಳಿಸಿದರು.
ಮುಖಂಡರಾದ ಶಿವಕುಮಾರ್, ಗಜೇಂದ್ರ, ದೊಡ್ಡಣ್ಣ, ಸುರೇಶ್, ಸುವರ್ಣ, ಕೇಶವಮೂರ್ತಿ ಹಾಗೂ ತಾಲ್ಲೂಕಿನ ವಿವಿಧೆಡೆಯ ರೈತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.