ಕೆರಗೋಡು: ರಾಸುಗಳ ಸರಣಿ ಸಾವಿನಿಂದ ಕಂಗೆಟ್ಟಿರುವ ಸಮೀಪದ ಕೀಲಾರ ಗ್ರಾಮದ ರೈತ ಸಹೋದರರ ಮನೆಗೆ ಭಾನುವಾರ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಭೇಟಿ ನೀಡಿ ಮಾಹಿತಿ ಪಡೆದು ಸಾಂತ್ವನ ಹೇಳಿದರು.
‘ಪ್ರಜಾವಾಣಿ’ ಪತ್ರಿಕೆಯಲ್ಲಿ ಭಾನುವಾರ ಪ್ರಕಟವಾದ ‘ಸ್ಪಂದಿಸದ ಜನಪ್ರತಿನಿಧಿಗಳು: ಬೇಸರ’, ‘29 ಜಾನುವಾರುಗಳ ನಿಗೂಢ ಸಾವು’ ಸುದ್ದಿ ನೋಡಿ ಪ್ರಕರಣದ ತೀವ್ರತೆ ಅಚ್ಚರಿ ಮೂಡಿಸಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸೋಮವಾರ ರೈತರ ಮನೆಗೆ ಬರಲಿದ್ದು, ಸಾಂತ್ವನ ಹೇಳಲಿದ್ದಾರೆ. ಮುಖ್ಯಮಂತ್ರಿ ಜತೆ ಚರ್ಚಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಕುಮಾ ರಸ್ವಾಮಿ ಅವರು ಸದನದಲ್ಲಿ ಚರ್ಚಿಸಲಿದ್ದಾರೆ ಎಂದರು.
ಪಶುಸಂಗೋಪನಾ ಇಲಾಖೆ ಮೂಲಕ ತಜ್ಞರನ್ನು ಕರೆಸಿ ಸ್ಥಳ ಪರಿಶೀಲಿಸುವ ಜತೆಗೆ ಭಾರತ ಜ್ಞಾನ ವಿಜ್ಞಾನ ಸಮಿತಿ ಮೂಲಕ ಸತ್ಯಶೋಧನಾ ಸಮಿತಿ ರಚಿಸಿ ಪ್ರಕರಣ ಭೇದಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕುಟುಂಬಸ್ಥರಿಗೆ ಭರವಸೆ ನೀಡಿದರು.
ರೈತ ನಾಯಕಿ ಸುನಂದಾ ಜಯರಾಮ್, ಪ್ರಕರಣದ ಸತ್ಯಾಸತ್ಯತೆ ಹೊರಬಂದು ಭಯ ಮುಕ್ತರಾಗಲು ಸಹಕಾರ ನೀಡಲಾಗುವುದು ಎಂದರು.
ಉಪನ್ಯಾಸಕ ರೇವಣ್ಣ, ರೈತ ಸಂಘದ ಅಧ್ಯಕ್ಷ ಬೋರೇಗೌಡ, ಎಪಿಎಂಸಿ ನಿರ್ದೇಶಕ ಕೆ.ಪಿ.ವೀರಪ್ಪ, ರೈತರಾದ ಕೆ.ಎಂ.ಕೃಷ್ಣೇಗೌಡ, ಕೆ.ಎಂ.ಶಂಕರೇ ಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಎಂ.ಮಂಚೇಗೌಡ, ಕೆ.ಎನ್.ಪ್ರದೀಪ್, ಶ್ರೀಧರ್, ಎಪಿಎಂಸಿ ನಿರ್ದೇಶಕ ಕೆ.ಪಿ.ವೀರಪ್ಪ, ಮುಖಂಡರಾದ ಬಸವಣ್ಣ, ಮುದ್ದೇಗೌಡ, ಕೆ.ಎಂ.ಕೃಷ್ಣೇಗೌಡ, ಮುದ್ದಪ್ಪ ಇದ್ದರು.
ಸ್ಪಂದನೆ: ಗ್ರಾಮದ ವೀರೇಶ್–ಸೌಮ್ಯ ದಂಪತಿ ಪುತ್ರ ಜೀವನ್ ಮೂರು ವರ್ಷಗಳ ಹಿಂದೆ ಆಟವಾಡುವಾಗ ಮರದಿಂದ ಬಿದ್ದು ಬಟ್ಟೆಯಲ್ಲಿ ನೇತಾಡಿ ಜೀವನ್ಮರಣ ಸ್ಥಿತಿಯಲ್ಲಿದ್ದಾಗ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಪಾರಾಗಿದ್ದು, ಇನ್ನೂ ಹೆಚ್ಚಿನ ಚಿಕಿತ್ಸೆಗೆ ಸಹಕಾರ ಕೇಳಿದರು. ಕೂಡಲೇ ಸ್ಪಂದಿಸಿದ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಶಾಸಕರ ಅನುದಾನದಲ್ಲಿ ಸ್ಕೂಟರ್ ವಿತರಿಸುವ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.