ಕೆ.ಆರ್.ಪೇಟೆ: ತಾಲ್ಲೂಕಿನ ಕೋಮನಹಳ್ಳಿ ಗ್ರಾಮದ ರೈತ ವಿಜ್ಞಾನಿ ರೋಬೊ ಮಂಜೇಗೌಡ ನೀರು ಮತ್ತು ವಿದ್ಯುತ್ ಉಳಿಸಬಲ್ಲ ‘ವಾಟರ್ ವಾಲ್ಯೂಂ ಸಿಸ್ಟಂ ಸಾಧನ’ವನ್ನು ಆವಿಷ್ಕಾರಿಸಿದ್ದಾರೆ.
ಗ್ರಾಮದ ತಮ್ಮ ತೋಟದ ಮನೆಯಲ್ಲಿ ಮಂಗಳವಾರ ಯಂತ್ರದ ಪ್ರಾತ್ಯಕ್ಷಿಕೆ ನೀಡಿದರು.
ಬೆಳೆಗಳ ಅಗತ್ಯಕ್ಕೆ ತಕ್ಕಂತೆ ನೀರನ್ನು ಸರಬರಾಜು ಮಾಡಬಹುದು. ಹನಿ ನೀರಾವರಿ ಪದ್ಧತಿಗೆ ಈ ಯಂತ್ರವನ್ನು ಅಳವಡಿಸಿದರೆ ಸಾಕು. ಯಾವ ಯಾವ ಬೆಳೆಗೆ ಎಷ್ಟು ನೀರು ಪೂರೈಕೆ ಮಾಡಬೇಕು ಎಂಬುದನ್ನು ಯಂತ್ರದ ತಂತ್ರಾಂಶದಲ್ಲಿ ಅಡಕಗೊಳಿಸಲಾಗಿದೆ. ಹೀಗಾಗಿ, ಅಗತ್ಯ ನೀರು ಪೂರೈಕೆ ಆದ ಬಳಿಕ ಪಂಪ್ಸೆಟ್ ಆಫ್ ಆಗುತ್ತದೆ. ಇದರಿಂದ ನೀರು ಅನಗತ್ಯವಾಗಿ ಪೋಲಾಗುವುದನ್ನು ತಪ್ಪಿಸಬಹುದು ಎಂದು ಮಂಜೇಗೌಡ ತಿಳಿಸಿದರು.
ಒಂದು ಬಾಳೆ ಗಿಡಕ್ಕೆ 30 ಲೀಟರ್ನಂತೆ ಒಂದು ಎಕರೆಯಲ್ಲಿ 1,000 ಬಾಳೆ ಗಿಡಗಳಿಗೆ 30 ಸಾವಿರ ಲೀಟರ್ ನೀರು ಬೇಕಾಗುತ್ತದೆ. ಈ ಯಂತ್ರದ ಸಹಾಯದಿಂದ ಅಷ್ಟೇ ನೀರನ್ನು ಪೂರೈಸಬಹುದು. ಇದರಿಂದ ವಿದ್ಯುತ್ ಹಾಗೂ ನೀರು ಉಳಿತಾಯವಾಗುತ್ತದೆ ಎಂದು ವಿವರಿಸಿದರು.
ವಿ.ಸಿ. ಫಾರಂನ ವಿಜ್ಞಾನಿ ಮಹೇಶ್, ಪ್ರಗತಿಪರ ರೈತ ಮಹಿಳೆ ಹೊಸಕೋಟೆ ಲಕ್ಷ್ಮಿದೇವಮ್ಮ ಸೇರಿದಂತೆ ನೂರಾರು ರೈತರು ಪ್ರಾತ್ಯಕ್ಷಿಕೆಯನ್ನು ನೋಡಿದರು. ಅಲ್ಲದೆ, ಮಂಜೇಗೌಡ ಅವರ ಸಾವಯವ ತೋಟವನ್ನು ಕಣ್ತುಂಬಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.