
ಶ್ರೀರಂಗಪಟ್ಟಣ: ‘ಜಿಲ್ಲೆಯಲ್ಲಿರುವ ಸಹಕಾರ ಸಂಘಗಳ ಪುನರುಜ್ಜೀವನಕ್ಕೆ ಆದ್ಯತೆ ಕೊಟ್ಟು ಕೆಲಸ ಮಾಡುತ್ತೇನೆ’ ಎಂದು ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ (ಎಂಡಿಸಿಸಿ) ಬ್ಯಾಂಕ್ ನೂತನ ನಿರ್ದೇಶಕ ಬಿ. ಗಿರೀಶ್ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಪಿಕಾರ್ಡ್ ಬ್ಯಾಂಕ್ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಮಂಡ್ಯ ಜಿಲ್ಲೆಯಲ್ಲಿ ನೂರಾರು ಸಹಕಾರಿ ಸಂಘಗಳಿದ್ದು, ರೈತರು, ಹಾಲು ಉತ್ಪಾದಕರು, ನೀರು ಬಳಕೆದಾರರ ಏಳಿಗೆಗಾಗಿ ಕೆಲಸ ಮಾಡುತ್ತಿವೆ. ಈ ಸಂಘಗಳಿಗೆ ಮತ್ತಷ್ಟು ಚೈತನ್ಯ ನೀಡುವ ಅಗತ್ಯವಿದೆ. ಈ ದಿಸೆಯಲ್ಲಿ ಎಂಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಅಧಿಕಾರಿಗಳ ಜತೆಗೂಡಿ ಕಾರ್ಯಕ್ರಮ ರೂಪಿಸಲಾಗುವುದು. ಶಾಸಕ ರಮೇಶ ಬಂಡಿಸಿದ್ದೇಗೌಡ ನನ್ನ ಮೇಲೆ ವಿಶ್ವಾಸವಿಟ್ಟು ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಲು ಸಹಕರಿಸಿದ್ದಾರೆ. ಅವರ ನಿರೀಕ್ಷೆಯಂತೆ ದುಡಿಯುತ್ತೇನೆ’ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಂ. ನಾಗರಾಜು ಮಾತನಾಡಿ, ‘ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ವ್ಯಾಪಾರ ವಹಿವಾಟು ಉತ್ತಮವಾಗಿ ನಡೆಯುತ್ತಿದ್ದು, ಮತ್ತಷ್ಟು ವಿಸ್ತರಿಸಲಾಗುವುದು. ಸಂಘದ ಕಲ್ಯಾಣ ಮಂಟಪಕ್ಕೆ ಕಾಯಕಲ್ಪ ನೀಡಲಾಗುವುದು. ಪ್ರಗತಿಯತ್ತ ಕೊಂಡೊಯ್ಯಲಾಗುವುದು’ ಎಂದು ಹೇಳಿದರು.
ಬಿ. ಗಿರೀಶ್ ಮತ್ತು ಎಸ್.ಎಂ. ನಾಗರಾಜು ಅವರನ್ನು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಿ. ಚಲುವೇಗೌಡ ಅಭಿನಂದಿಸಿದರು.
‘ಪಿಕಾರ್ಡ್ ಬ್ಯಾಂಕ್ ವತಿಯಿಂದ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಆರ್ಥಿಕ ನೆರವು ಕೊಡಿಸಬೇಕು’ ಎಂದು ಚಲುವೇಗೌಡ ಮನವಿ ಮಾಡಿದರು.
ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಬುಡ್ಡೇಗೌಡ, ನಿರ್ದೇಶಕರಾದ ಸಿ. ದೇವರಾಜು, ಟಿ.ಎಂ. ಹೊಸೂರು ಮಹದೇವು, ಬೆಳಗೊಳ ಮೋಹನಕುಮಾರ್ (ರವೀಶ್), ಟಿಎಪಿಸಿಎಂಎಸ್ ನಿರ್ದೇಶಕ ಕೆ.ಜೆ. ರವಿಶಂಕರ್, ಕಾಂಗ್ರೆಸ್ ಮುಖಂಡರಾದ ಸಿ. ಸ್ವಾಮಿಗೌಡ, ಪುಟ್ಟೇಗೌಡ, ಸಬ್ಬನಕುಪ್ಪೆ ಕೃಷ್ಣೇಗೌಡ, ಮಲ್ಲೇಶ್, ಚಕ್ಕ ಅಂಕನಹಳ್ಳಿ ನಿಂಗೇಗೌಡ, ಶಾಂತಕುಮಾರ್, ಚಂದ್ರನಾಗು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.