ADVERTISEMENT

ಕಿರುತೆರೆ ನಟ ಎಂ.ರವಿಪ್ರಸಾದ್‌ ನಿಧನ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 14:23 IST
Last Updated 14 ಸೆಪ್ಟೆಂಬರ್ 2022, 14:23 IST
ಎಂ.ರವಿಪ್ರಸಾದ್‌
ಎಂ.ರವಿಪ್ರಸಾದ್‌   

ಮಂಡ್ಯ: ರಂಗಭೂಮಿ, ಕಿರುತೆರೆ ನಟ, ಸಾಹಿತಿ ಡಾ.ಎಚ್‌.ಎಸ್‌.ಮುದ್ದೇಗೌಡ ಅವರ ಪುತ್ರ ಎಂ.ರವಿ ಪ್ರಸಾದ್‌ (43) ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.

ಅವರಿಗೆ ತಂದೆ, ತಾಯಿ, ಪತ್ನಿ, ಪುತ್ರ, ಇಬ್ಬರು ತಂಗಿಯರು ಇದ್ದಾರೆ. ಮಂಡ್ಯದ ಗೆಳೆಯರ ಬಳಗ, ಜನದನಿ ತಂಡಗಳ ಮೂಲಕ ರಂಗಕ್ಷೇತ್ರಕ್ಕೆ ಕಾಲಿಟ್ಟಿದ್ದರು. ನಂತರ ಕಿರುತೆರೆ ಧಾರಾವಾಹಿ, ಸಿನಿಮಾಗಳಲ್ಲಿ ಅಭಿನಯಿಸಿ ‘ಮಂಡ್ಯ ರವಿ’ ಎಂದೇ ಪ್ರಸಿದ್ಧಿ ಪಡೆದಿದ್ದರು. ಎಂ.ಎ ಇಂಗ್ಲಿಷ್, ಎಲ್ಎಲ್.ಬಿ ಪದವಿ ಪಡೆದಿದ್ದ ಅವರು ನಟನಾ ಕ್ಷೇತ್ರವನ್ನೇ ವೃತ್ತಿಯಾಗಿ ಸ್ವೀಕರಿಸಿದ್ದರು.

ಟಿ.ಎಸ್. ನಾಗಾಭರಣ ನಿರ್ದೇಶನದ ‘ಮಹಾಮಾಯಿ’ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಟಿ.ಎನ್‌.ಸೀತಾರಾಮ್‌ ಅವರ ಬಹುತೇಕ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಮಿಂಚು, ಮುಕ್ತ ಮುಕ್ತ, ಮಗಳು ಜಾನಕಿ, ಚಿತ್ರಲೇಖ, ಯಶೋಧೆ, ವರಲಕ್ಷ್ಮಿ ಸ್ಟೋರ್ಸ್‌ ಮುಂತಾದ ಧಾರಾವಾಹಿಗಳು ಹೆಸರು ತಂದುಕೊಟ್ಟಿದ್ದವು.

ADVERTISEMENT

‘ಮಗಳು ಜಾನಕಿ’ ಯಲ್ಲಿ ‘ಚಂದು ಬಾರ್ಗಿ’ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಕಾಫಿ ತೋಟ ಸೇರಿದಂತೆ ಹಲವು ಸಿನಿಮಾಗಳಲ್ಲೂ ರವಿ ನಟಿಸಿದ್ದರು.

ಅನಾರೋಗ್ಯದಿಂದಾಗಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಸೇರಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಅಂತ್ಯಕ್ರಿಯೆ ನಗರದ ಕಲ್ಲಹಳ್ಳಿಯಲ್ಲಿರುವ ರುದ್ರಭೂಮಿಯಲ್ಲಿ ಗುರುವಾರ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.