ಭಾರತೀನಗರ: ‘ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯು ಅವೈಜ್ಞಾನಿಕವಾಗಿದ್ದು, ಇವು ಜನರನ್ನು ಇಕ್ಕಟ್ಟಿಗೆ ಸಿಲುಕಿಸಲಿವೆ’ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಟೀಕಿಸಿದರು.
‘ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಲ್ಲಿ ಕೇಳಲಾದ ಅರವತ್ತು ಪ್ರಶ್ನೆಗಳಿಗೆ ಉತ್ತರಿಸಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಗಂಟೆಗಟ್ಟಲೆ ಸಮಯ ತೆಗೆದುಕೊಂಡಿದ್ದಾರೆ. ಹೀಗಿರುವಾಗ ಜನಸಾಮಾನ್ಯರ ಪಾಡೇನು?. ಇದಲ್ಲದೆ ಅತ್ಯಲ್ಪ ಸಮಯದಲ್ಲಿ ಸಮೀಕ್ಷೆ ನಿಗದಿಗೊಳಿಸಿದ್ದು, ಇದರ ಹಿಂದಿನ ಉದ್ದೇಶವೇನು’ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
‘ಸಮೀಕ್ಷೆ ನಡೆಸಲು ಬರುವವರು ಕೇಳುವ ಪ್ರಶ್ನೆಗಳಿಗೆ ಜನರು ಸರಿಯಾದ ಮಾಹಿತಿ ನೀಡಬೇಕು. ಸಾಲವಿದ್ದರೂ ಅದನ್ನು ಮುಚ್ಚಿಟ್ಟುಕೊಳ್ಳಲು, ಚಿನ್ನವಿಲ್ಲದಿದ್ದರೂ ದೊಡ್ಡಸ್ತಿಕೆ ತೋರಿಸಿಕೊಳ್ಳಲು ಚಿನ್ನವಿದೆ, ಸಾಲವಿಲ್ಲ ಎಂದು ಹೇಳಿದರೆ ಮುಂದೆ ಆಪತ್ತು ಕಾದಿದೆ. ಇಂಥ ಪ್ರಶ್ನೆಗಳ ಮೂಲಕ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿ ಅನ್ನಭಾಗ್ಯ ಯೋಜನೆಯ ಪಡಿತರ ಚೀಟಿಗಳನ್ನು ಕಿತ್ತು ಹಾಕಿ ಸರ್ಕಾರ ಹಣ ಉಳಿಸುವ ಪ್ರಯತ್ನ ಮಾಡುತ್ತಿದೆ’ ಎಂದು ಆರೋಪಿಸಿದರು.
ಜೆಡಿಎಸ್ ಮುಖಂಡರಾದ ಆಲಭುಜನಹಳ್ಳಿ ಚಂದ್ರಶೇಖರ್, ಮರಿಮಾದೇಗೌಡ, ಅಣ್ಣೂರು ನವೀನ್, ಎ.ಟಿ.ಶಂಕರೇಗೌಡ, ಕ್ಯಾತಘಟ್ಟ ಗಿರೀಶ್, ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.