ಮೇಲುಕೋಟೆ: ಚೆಲುವನಾರಾಯಣಸ್ವಾಮಿಯ ಆಷಾಢ ಜಾತ್ರಾಮಹೋತ್ಸವ ಎಂದೇ ಪ್ರಖ್ಯಾತವಾದ ಕೃಷ್ಣರಾಜಮುಡಿ ಬ್ರಹ್ಮೋತ್ಸವವನ್ನು ಭಕ್ತರ ಪ್ರವೇಶ ನಿಷೇಧಿಸಿ ಜುಲೈ 7ರಿಂದ ಸರಳವಾಗಿ ಆಚರಿಸಲಾಗುವುದು ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ ತಿಳಿಸಿದ್ದಾರೆ.
ಕೋವಿಡ್ 19 ಹಿನ್ನೆಲೆಯಲ್ಲಿ ರಾಜ್ಯದ ಮುಜರಾಯಿ ದೇವಾಲಯಗಳ ವಿಶೇಷ ಉತ್ಸವಗಳನ್ನು ಸರ್ಕಾರ ರದ್ದು ಮಾಡಿದೆ. ನಿತ್ಯಪೂಜೆಗೆ ಮಾತ್ರ ಅವಕಾಶ ಕಲ್ಪಿಸಿದೆ.
ಜುಲೈ 7ರ ಮಹಾಭಿಷೇಕದಿಂದ ಕೃಷ್ಣರಾಜಮುಡಿ ಉತ್ಸವದ ಆಚರಣೆ ಆರಂಭವಾಗಿ ಜುಲೈ 17ರವರೆಗೆ ನಡೆಯಲಿದೆ. ಜುಲೈ 12ರಂದು ಬ್ರಹ್ಮೋತ್ಸವ ಮುಖ್ಯಕಾರ್ಯಕ್ರಮ ಶ್ರೀಕೃಷ್ಣರಾಜಮುಡಿ ಕಿರೀಟಧಾರಣಾ ಮಹೋತ್ಸವ ನಡೆಯಲಿದೆ.
ಮಂಡ್ಯ ಜಿಲ್ಲಾ ಖಜಾನೆಯಿಂದ ವಜ್ರಖಚಿತ ಕೃಷ್ಣರಾಜಮುಡಿ ಕಿರೀಟ ತಂದು ಸ್ವಾಮಿಗೆ ಧರಿಸಿ ದೇವಾಲಯದ ಒಳಭಾಗದಲ್ಲಿ ಉತ್ಸವ ನೆರವೇರಿಸಲಾಗುತ್ತದೆ. ಆದರೆ, ಹೆಚ್ಚಿನ ಜನಸಂಖ್ಯೆ ಸೇರದಂತೆ ಎಚ್ಚರವಹಿಸಲಾಗುತ್ತದೆ ಎಂದರು.
ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಜನ್ಮ ನಕ್ಷತ್ರದ ಅಂಗವಾಗಿ ಬೆಳಿಗ್ಗೆ ಚೆಲುವನಾರಾಯಣಸ್ವಾಮಿಗೆ ಮಹಾಭಿಷೇಕ, ಸಂಜೆ ಕಲ್ಯಾಣೋತ್ಸವ ಮತ್ತು ಮಹಾರಾಜರ ಭಕ್ತ ವಿಗ್ರಹಕ್ಕೆ ವಿಶೇಷ ಆರಾಧನೆ ನಡೆಯಲಿದೆ. ನಂತರ ಪ್ರತಿ ದಿನ ಯಾಗಶಾಲೆ, ಬ್ರಹ್ಮೋತ್ಸವದ ವಿಶೇಷ ಕಾರ್ಯಕ್ರಗಳು ನಡೆಯಲಿದೆ. ಹೊರಭಾಗ ನಡೆಯುತ್ತಿದ್ದ ಉತ್ಸವಗಳು, ವಾಹನೋತ್ಸವ ಕಲ್ಯಾಣಿಯಲ್ಲಿ ನಡೆಯಬೇಕಿದ್ದ ತೀರ್ಥಸ್ನಾನ, ಮಹೋತ್ಸವಗಳನ್ನು ದೇವಾಲಯದ ಒಳಭಾಗದಲ್ಲೇ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.