ಶ್ರೀರಂಗಪಟ್ಟಣ(ಮಂಡ್ಯ): ತಾಲ್ಲೂಕಿನ ಚಂದಗಾಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದ ಜಾಗದ ಪಹಣಿಯಲ್ಲಿ ‘ವಕ್ಫ್’ ಎಂದು ನಮೂದಾಗಿರುವುದನ್ನು ಖಂಡಿಸಿ ಗ್ರಾಮಸ್ಥರು ಶನಿವಾರ ಶಾಲೆಯ ಎದುರು ಪ್ರತಿಭಟನೆ ನಡೆಸಿದರು.
ಶಾಲೆಯ ಕಟ್ಟಡ ಮತ್ತು ಆಟದ ಮೈದಾನ ಸೇರಿ ಸ.ನಂ. 215ರಲ್ಲಿ 30 ಗುಂಟೆ ಜಾಗವಿದೆ. ಈ ಜಾಗದ ಪಹಣಿಯ 9ನೇ ಕಾಲಂನಲ್ಲಿ ‘ಖಬರ ಸ್ಥಾನ ವಕ್ಫ್’ ಎಂದು ನಮೂದಾಗಿದೆ. ಇದೇ ಪಹಣಿಯ 11ನೇ ಕಾಲಂನಲ್ಲಿ ‘ಕರ್ನಾಟಕ ರಾಜ್ಯ ವಕ್ಫ್ ಮಂಡಳಿ’ ಎಂದು ಬರುತ್ತಿದೆ. ಈ ವಿಷಯ ತಿಳಿದ ಗ್ರಾಮಸ್ಥರು ಕಂದಾಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಂದಗಾಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೂ ಖಬರಸ್ಥಾನಕ್ಕೂ ಸಂಬಂಧವೇ ಇಲ್ಲ. ಈ ಊರಲ್ಲಿ ಮುಸ್ಲಿಂ ಜನಾಂಗ ವಾಸವಾಗಿಲ್ಲ. ಹಿಂದೆಯೂ ಇರಲಿಲ್ಲ. ಹೀಗಿರುವಾಗ ಶಾಲೆಗೆ ಸೇರಿದ ಜಾಗದ ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿದ್ದಾರೂ ಹೇಗೆ? ಗ್ರಾ.ಪಂ. ಸದಸ್ಯ ರಮೇಶ್ ಪ್ರಶ್ನಿಸಿದರು.
ಸರ್ಕಾರಿ ಶಾಲೆಯ ಜಾಗದ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ಅಚ್ಚರಿ ಮೂಡಿಸಿದೆ. ಕಂದಾಯ ಇಲಾಖೆ ಅಧಿಕಾರಿಗಳು ತಕ್ಷಣ ಈ ತಪ್ಪನ್ನು ಸರಿಪಡಿಸಬೇಕು ಎಂದು ಮುಖಂಡ ರಾಮಚಂದ್ರು ಆಗ್ರಹಿಸಿದರು. ಜಗದೀಶ್, ನಾಗೇಶ್, ಪ್ರಸನ್ನ, ರಾಮಚಂದ್ರೇಗೌಡ, ಶಂಕರ್, ಶಿವಣ್ಣ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.