ADVERTISEMENT

ಶ್ರೀರಂಗಪಟ್ಟಣ: ಋಷಿಕುಮಾರ ಸ್ವಾಮೀಜಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 17:55 IST
Last Updated 19 ಜನವರಿ 2022, 17:55 IST
ಋಷಿ ಕುಮಾರ ಸ್ವಾಮೀಜಿ
ಋಷಿ ಕುಮಾರ ಸ್ವಾಮೀಜಿ   

ಶ್ರೀರಂಗಪಟ್ಟಣ: ಪಟ್ಟಣದ ಟಿಪ್ಪು (ಜಾಮಿಯಾ) ಮಸೀದಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಮಂಗಳವಾರದಿಂದ ನ್ಯಾಯಾಂಗ ಬಂಧನದಲ್ಲಿದ್ದ ಅರಸೀಕರೆಯ ಕಾಳಿಕಾಶ್ರಮದ ಋಷಿಕುಮಾರ ಸ್ವಾಮೀಜಿ ಅವರಿಗೆ ಪಟ್ಟಣದ ಹೆಚ್ಚುವರಿ ಕಿರಿಯ ಶ್ರೇಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.

ಒಂದು ಲಕ್ಷ ರೂಪಾಯಿ ಬಾಂಡ್‌ ಜತೆಗೆ ಪ್ರಕರಣದ ಸಾಕ್ಷಿಗಳನ್ನು ಬೆದರಿಸಬಾರದು ಎಂಬ ಷರತ್ತುಗಳನ್ನು ವಿಧಿಸಿ ನ್ಯಾಯಾಧೀಶರಾದ ಆಯೇಷಾ ಪಿ.ಮಜೀದ್‌ ಜಾಮೀನು ಮಂಜೂರು ಮಾಡಿದ್ದಾರೆ.

ಕೋಮು ಸಾಮರಸ್ಯ ಕದಡುವ ಹೇಳಿಕೆ ನೀಡಿದ್ದ ಆರೋಪದ ಮೇಲೆ ಪಟ್ಟಣ ಠಾಣೆ ಪೊಲೀಸರು ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಿ ಮಂಗಳವಾರ ಬಂಧಿಸಿದ್ದರು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ADVERTISEMENT

ಸ್ವಾಮೀಜಿ ಅವರಿಗೆ ಜಾಮೀನು ನೀಡುವಂತೆ ಪಟ್ಟಣದ ವಕೀಲರಾದ ಎಸ್‌.ಆರ್‌.ಸಿದ್ದೇಶ್‌, ಟಿ.ಬಾಲರಾಜು ಮತ್ತು ಎ.ಟಿ.ಜಯಕುಮಾರ್‌ ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಿದ್ದರು. ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಸ್ವಾಮೀಜಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ, ಜಾಮೀನು ನೀಡುವ ಆದೇಶವನ್ನು ಬುಧವಾರಕ್ಕೆ ಕಾಯ್ದಿರಿಸಿತ್ತು.

ಋಷಿಕುಮಾರ ಸ್ವಾಮೀಜಿ ಅವರಿಗೆ ಜಾಮೀನು ಸಿಕ್ಕಿರುವುದು ಸಂತಸ ತಂದಿದೆ. ನ್ಯಾಯಾಲಯದ ಆದೇಶವನ್ನು ಮಂಡ್ಯ ಉಪ ಕಾರಾಗೃಹದ ಅಧೀಕ್ಷರಿಗೆ ಇ– ಮೇಲ್‌ ಮೂಲಕ ಕಳುಹಿಸಲಾಗಿದೆ. ಬುಧವಾರ ರಾತ್ರಿಯ ಒಳಗೆ ಸ್ವಾಮೀಜಿ ಬಿಡುಗಡೆಯಾಗಲಿದ್ದಾರೆ ಎಂದು ವಕೀಲ ಟಿ.ಬಾಲರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.