ಮಂಡ್ಯ: ತಾಲ್ಲೂಕಿನ ಮಾರದೇವನಹಳ್ಳಿ ಗ್ರಾಮದಲ್ಲಿರುವ ಶ್ರೀಸತ್ಯಸಾಯಿ ಸರಸ್ವತಿ ಬಾಲಕರ ಪ್ರೌಢಶಾಲೆ ವಿದ್ಯಾರ್ಥಿ ಎಂ.ಪಿ.ಧೀರಜ್ ರೆಡ್ಡಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿದ್ದಾರೆ. ಇವರು ಆಂಧ್ರಪ್ರದೇಶದ ಗಡಿ, ಕೋಲಾರ ಜಿಲ್ಲೆ, ಬಂಗಾರಪೇಟೆ ತಾಲ್ಲೂಕು ಕ್ಯಾಸಂಬಳ್ಳಿ ಗ್ರಾಮದ ಹುಡುಗ.
ಚಿಕ್ಕಬಳ್ಳಾಪುರ ಜಿಲ್ಲೆ ಮದ್ದೇನಹಳ್ಳಿ ಗ್ರಾಮದ ಶ್ರೀಸತ್ಯಸಾಯಿ ಸರಸ್ವತಿ ವಿದ್ಯಾಸಂಸ್ಥೆಯ ಅಂಗಸಂಸ್ಥೆಯಾಗಿರುವ ಪ್ರೌಢಶಾಲೆಯಲ್ಲಿ ಧೀರಜ್ 9, 10ನೇ ತರಗತಿಯನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿದ್ದರು. ತಂದೆ ಎಂ.ಪ್ರಭಾಕರ್ ರೆಡ್ಡಿ ಆಂಧ್ರಪ್ರದೇಶದ ಶಾಂತಿಪುರಂ ಶಾಲೆಯೊಂದರಲ್ಲಿ ಶಿಕ್ಷಕರು, ತಾಯಿ ಮಂಜುಳಾ ಕೂಡ ಶಿಕ್ಷಕಿ.
ಮಾತೃಭಾಷೆ ತೆಲುಗು ಆಗಿರುವ ಕಾರಣ ಕನ್ನಡ ಭಾಷಾ ವಿಷಯದಲ್ಲಿ ಎರಡು ಅಂಕ ಕಡಿಮೆಯಾಗಬಹುದು ಎಂದು ಲೆಕ್ಕ ಹಾಕಿದ್ದರು. ಆದರೆ ಕನ್ನಡದಲ್ಲಿ 125ಕ್ಕೆ 125 ಅಂಕ ಬಂದಿದ್ದು ವಿದ್ಯಾರ್ಥಿ ಕುಟುಂಬದಲ್ಲಿ ಸಂತಸ ನೆಲೆಗೊಂಡಿದೆ.
‘ಕನ್ನಡ ವಿಷಯದ ಪ್ರಬಂಧದಲ್ಲಿ 2 ಅಂಕ ಕಡಿಮೆ ಬರಬಹುದು ಎಂದು ಭಾವಿಸಿದ್ದೆ. ಆದರೆ ಪೂರ್ತಿ ಅಂಕ ಬಂದಿರುವುದು ಸಂತಸವಾಗುತ್ತಿದೆ. ಕೋವಿಡ್ ಲಾಕ್ಡೌನ್ ಅವಧಿಯಲ್ಲಿ ಸಾಕಷ್ಟು ಸಮಯ ಸಿಕ್ಕ ಕಾರಣ ಚೆನ್ನಾಗಿ ಓದಿಕೊಳ್ಳಲು ಸಾಧ್ಯವಾಯಿತು’ ಎನ್ನುತ್ತಾರೆ ಎಂ.ಪಿ.ಧೀರಜ್ ರೆಡ್ಡಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.